ಉಡುಪಿ: ಕಾಪುವಿನ ಮಣಿಪುರ ಗ್ರಾಮದಲ್ಲಿ 11 ವರ್ಷದ ಬಾಲಕಿಯ ನಿಗೂಢ ಸಾವಾಗಿರುವ ಬಗ್ಗೆ ವರದಿಯಾಗಿದೆ. ಸಂದೇಶ್ ಎಂಬವರ ಮಗಳು ಧನ್ವಿ ಮೃತಪಟ್ಟ ದುರ್ದೈವಿ.
4ನೇ ತರಗತಿ ಮುಗಿಸಿದ್ದ ಧನ್ವಿ ಪ್ರಸ್ತುತ ರಜೆಯ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಳು. ಮೇ 8ರಂದು ರಾತ್ರಿ ಎಲ್ಲರೊಂದಿಗೂ ಊಟ ಮಾಡಿ ಧನ್ವಿ ಮಲಗಿದ್ದಳು. ಮೇ 9ರಂದು ನಸುಕಿನ ವೇಳೆ 3 ಗಂಟೆಗೆ ಧನ್ವಿ ಎಚ್ಚರಗೊಂಡು ವಾಂತಿ ಮಾಡಲಾರಂಭಿಸಿದ್ದಾಳೆ. ಬಳಿಕ ನೀರನ್ನು ಕೊಟ್ಟು ಮಲಗಿಸಲಾಗಿತ್ತು. ಆದರೆ ಆಕೆ ಗಂಟೆಗೊಮ್ಮೆ ವಾಂತಿ ಮಾಡುತ್ತಿದ್ದಳು ಎನ್ನಲಾಗಿದೆ.
ಮೇ 9ರ ಬೆಳಿಗ್ಗೆ 9 ಗಂಟೆಗೆ ಕ್ಲಿನಿಕ್ ಒಂದಕ್ಕೆ ಧನ್ವಿಯನ್ನು ಕರೆದೊಯ್ಯಲಾಗಿತ್ತು. ವೈದ್ಯರು ಆಕೆಗೆ ಇಂಜೆಕ್ಷನ್ ಹಾಗೂ ಮದ್ದನ್ನು ಕೊಟ್ಟು ಗಂಟೆಗೊಮ್ಮೆ ಒಆರ್ ಎಸ್ ಕೊಡುವಂತೆ ಗಂಜಿ ಊಟ ನೀಡುವಂತೆ ತಿಳಿಸಿದ್ದರು.
ಮನೆಗೆ ಬಂದ ನಂತರ ಧನ್ವಿ ಆರೋಗ್ಯವಾಗಿದ್ದಳು. ಆದರೆ ಮಧ್ಯಾಹ್ನ 2 ಗಂಟೆ ವೇಳೆ ಏಕಾಏಕಿ ಮತ್ತೆ ಅನಾರೋಗ್ಯಕ್ಕೀಡಾದ ಮಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮೃತ ಬಾಲಕಿಯ ತಂದೆ ಸಂದೇಶ್ ಕಾಪು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.