ಉಳಿಯತ್ತಡ್ಕ: ಸಶಕ್ತ ಸಮಾಜದ ಬುನಾದಿಯೇ ವೈದಿಕ ಪರಂಪರೆ. ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ ನಿತ್ಯ ಕರ್ಮಾನುಷ್ಠಾನಗಳ ತಿಳುವಳಿಕೆ ಅತ್ಯಗತ್ಯ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಪುರೋಹಿತರತ್ನ ಬಿ. ಕೇಶವ ಆಚಾರ್ಯ ಅವರು ನುಡಿದರು. ಉಳಿಯತ್ತಡ್ಕದಲ್ಲಿ ನಡೆದ ವೈದಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಸಮಾಜದ ಗುರುಪರಂಪರೆಯು ಅನಾದಿ ಕಾಲದಿಂದಲೂ ಇದ್ದು, ಇಂದಿನ ತಾಂತ್ರಿಕ ಯುಗದಲ್ಲಿ ನಿತ್ಯಕರ್ಮಾನುಷ್ಠಾನಗಳು, ವೈದಿಕ ಪರಂಪರೆ, ವೈದಿಕ ಕೈಂಕರ್ಯಗಳ ಉಳಿಯುವಿಕೆ ಇಂತಹ ಶಿಬಿರದಿಂದ ಸಾಧ್ಯ ಎಂದು ಆಶೀರ್ವಚನವಿತ್ತರು. ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಆಯೋಜಿಸಿದ 22 ನೇ ವರ್ಷದ ವೈದಿಕ ಶಿಕ್ಷಣ ಶಿಬಿರವು ಹನ್ನೊಂದು ದಿನಗಳ ಅವಧಿಯಲ್ಲಿ ಉಳಿಯತ್ತಡ್ಕ ಗುರುಕೃಪಾಲಕ್ಷ್ಮೀ ನಿವಾಸದಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷರಾದ ಸುಂದರ ಆಚಾರ್ಯ ಕೋಟೆಕಾರು, ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ವೈದಿಕ ಶಿಕ್ಷಣ ಸಮಿತಿಯ ಕೋಶಾಧಿಕಾರಿ ವೆಂಕಟರಮಣ ಆಚಾರ್ಯ ಉಳುವಾರು, ಸಮಿತಿಯ ಮಾಜಿ ಅಧ್ಯಕ್ಷ ರಾಮಕೃಷ್ಣ ಆಚಾರ್ಯ ಮುಳ್ಳೇರಿಯಾ, ಕಾರ್ಯದರ್ಶಿ ರವೀಂದ್ರ ಆಚಾರ್ಯ ಮುಳ್ಳೇರಿಯಾ, ಸಿವಿಲ್ ಇಂಜಿನೀಯರ್ ಪ್ರಾಣೇಶ್ ತಲಪ್ಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭರತ್ ಕುಮಾರ್ ಸ್ವಾಗತಿಸಿ ಹರಿಪ್ರಸಾದ್ ಶರ್ಮ ವಂದಿಸಿದರು. ಕಿರಣ್ ಶರ್ಮಾ ನಿರೂಪಿಸಿದರು. ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.