ಜನಿಸಿ 33 ತಿಂಗಳು ಕಳೆಯುವಷ್ಟರಲ್ಲೇ ಬಾಲೆಯೊಬ್ಬಳು ಇಂಡಿಯಾ ಬುಕ್ ಆಫ್ ರೆಕಾಡ್ಸ್ನಲ್ಲಿ ದಾಖಲೆ ಬರೆದಿದ್ದಾಳೆ.
ಈಕೆಯ ಹೆಸರು ಸದ್ವಿತಾ ಬಿರಾದಾರ್. ಈ ಪ್ರತಿಭಾನ್ವಿತ ಪುಟ್ಟ ಬಾಲೆಯನ್ನು ಕಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.
ಡಿ. ವೀರೇಂದ್ರ ಹೆಗ್ಗಡೆಯವರು ಭಾರತದ ಕೀರ್ತಿಯನ್ನು ಜಗದಗಲಕ್ಕೆ ಪ್ರಸಹರಿಸುವ ಸಾಧಕಿ ನೀನಾಗು ಎಂದು ಹರಸಿದ್ದಾರೆ.
ಪ್ರಸಕ್ತ ಉಪ್ಪಿನಂಗಡಿಯಲ್ಲಿ ವಾಸವಾಗಿರುವ ಚಿತ್ರಕಲಾ ಶಿಕ್ಷಕರಾಗಿರುವ ಸದಾನಂದ ಬಿರಾದಾರ್ ಹಾಗೂ ಸವಿತಾ ದಂಪತಿಯ ಮಗಳಾದ ಸದ್ವಿತಾ ಬಿರಾದಾರ್ಗೆ ಪ್ರಸಕ್ತ 2 ವರ್ಷ 9 ತಿಂಗಳು ವಯಸ್ಸು. ಪ್ರತಿಯೊಂದು ವಸ್ತುವಿನ ಬಗ್ಗೆಯೂ ಅತೀವ ಕುತೂಹಲದಿಂದ ಗಮನಿಸುವ ಈಕೆಗೆ ವಸ್ತುಗಳ, ಪ್ರಾಣಿ, ಪಕ್ಷಿಗಳ ಬಗ್ಗೆ ಹೆತ್ತವರು ಮಾಹಿತಿಯನ್ನು ನೀಡಲಾರಂಭಿಸಿದರು.
ಮಗು ಯಾವ ಮಾಹಿತಿಯನ್ನು ಪಡೆಯಿತೋ ಅದನ್ನು ನಿಖರವಾಗಿ ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನು ಗಮನಿಸಿದ ಹೆತ್ತವರು ಪೂರ್ಣ ಸಹಕಾರವನ್ನು ನೀಡಿದರು. ಇದರ ಪರಿಣಾಮವಾಗಿ ರಾಷ್ಟ್ರಗೀತೆ ಹೇಳುವುದು, ರಾಷ್ಟ್ರೀಯ ಚಿಹ್ನೆಗಳನ್ನು ಗುರುತಿಸುವುದು, ರಾಜ್ಯದ ರಾಜಧಾನಿಗಳ ಹೆಸರನ್ನು, ದೇಹದ ಭಾಗಗಳನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಹೇಳುವುದು, ಹೀಗೆ ಒಟ್ಟು 30ಕ್ಕಿಂತಲೂ ಹೆಚ್ಚಿನ ವಿಷಯಗಳಲ್ಲಿ ವಯಸ್ಸಿಗೂ ಮೀರಿದ ಸಾಧನೆ ತೋರಿದನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ -2022 ನಲ್ಲಿ ಅತೀ ಕಿರಿಯ ವಯಸ್ಸಿನ ಸಾಧಕಿಯಾಗಿ ಮೂಡಿ ಬಂದಿದ್ದಾಳೆ. ದಾಖಲೆ ಮೆರೆದ ಬಾಲೆಯು ತನ್ನ ಹೆತ್ತವರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದೆ.