ಕುಣಿಗಲ್: ರಾಮನವಮಿ ಪ್ರಯುಕ್ತ ನೀಡಲಾದ ಪಾನಕ ಸೇವಿಸಿ ಸುಮಾರು 42 ಮಂದಿ ಅಸ್ವಸ್ಥರಾದ ಘಟನೆ ಗೊಲ್ಲರಹಟ್ಟಿ ಸುತ್ತಮುತ್ತ ನಡೆದಿದೆ. ವಾಂತಿ ಬೇಧಿಗೊಳಗಾದ ಮಂದಿಯನ್ನು ಗುರುವಾರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವತ್ತಿ ಗ್ರಾಮ ಸಮೀಪದ ಸುಬ್ರಹ್ಮಣ್ಯ ದೇವಾಲಯದಲ್ಲಿ ರಾಮ ನವಮಿ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ ಮಾಡಲಾಗಿತ್ತು. ಸಂಜೆಯಾಗುತ್ತಿದ್ದಂತೆ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುರುವಾರ ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ, ಆಡಳಿತಾಧಿಕಾರಿ ಗಣೇಶ ಬಾಬು ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ. ದೋಷ ಪೂರಿತ ಪಾನಕ ಸೇವನೆಯೇ ಘಟನೆ ಕಾರಣವೆನ್ನಲಾಗಿದೆ.