ಮೂಲ್ಕಿ: ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವದಲ್ಲಿ 05-04-2024 ರಂದು ವಿದ್ಯಾಸಂಸ್ಥೆಯ ಸಂಸ್ಥಾಪಕರ ಸ್ಮರಣಾರ್ಥ ನಡೆದ 43ನೇ ವಿಶ್ವವಿದ್ಯಾಲಯ ಮಟ್ಟದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಪುರುಷರ ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದ್ದು, ವಿದ್ಯಾವರ್ಧಕ ಸಂಘ (ರಿ). ಶಿರ್ವದ ಸಂಚಾಲಕರಾದ ಸುಬ್ಬಯ್ಯ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ, ಪಂದ್ಯಾವಳಿಯನ್ನು ಪಿ. ವಿದ್ಯಾಧರ ಶೆಟ್ಟಿ, ಉಪ ಪ್ರಾದೇಶಿಕ ಮುಖ್ಯಸ್ಥರು, ಬ್ಯಾಂಕ್ ಆಫ್ ಬರೋಡ, ಉಡುಪಿ ರೀಜನ್ ಇವರು ಉದ್ಘಾಟಿಸಿ, ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕಿನ ಜೊತೆಗಿನ 43 ವರ್ಷದ ಸುದೀರ್ಘ ಒಡನಾಟದ ಕುರಿತು ಅನುಭವ ಹಂಚಿ, ಕ್ರೀಡಾಪಟುಗಳಿಗೆ ಸೋಲೇ ಗೆಲುವಿನ ಮೆಟ್ಟಿಲು ಎಂದು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘ (ರಿ.), ಶಿರ್ವದ ಆಡಳಿತ ಅಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿ ಇವರ ಉಪಸ್ಥಿತಿಯೊಂದಿಗೆ, ಮುಖ್ಯ ಅತಿಥಿಯಾಗಿ ಅತೀಶ್ ಅಂತೋನಿ, ಮುಖ್ಯ ವ್ಯವಸ್ಥಾಪಕರು ಬ್ಯಾಂಕ್ ಆಫ್ ಬರೋಡ-ಶಿರ್ವ ಶಾಖೆ ಹಾಗೂ ಕಾಲೇಜಿನ ದೈಹಿಕ ನಿರ್ದೇಶಕಿ ಸೌಮ್ಯ ಶೆಟ್ಟಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಇವರು ಸ್ವಾಗತಿಸಿ ಡಾ. ಸೋನಾ ಹೆಚ್.ಸಿ ಅವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ ವಾಣಿಜ್ಯ ವಿಭಾಗದ ಹೇಮಲತಾ ಶೆಟ್ಟಿ ನೆರವೇರಿಸಿದರು. ಈ ಪಂದ್ಯಾವಳಿಯಲ್ಲಿ 17 ತಂಡಗಳು ಭಾಗವಹಿಸಿದ್ದು, ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಎಸ್.ಡಿ.ಎಮ್ ಕಾಲೇಜು-ಉಜಿರೆ ಮತ್ತು ದ್ವಿತೀಯ ಸ್ಥಾನವನ್ನು ಶಾರದಾ ಕಾಲೇಜು- ಬಸ್ರೂರಿನ ಸ್ಪರ್ಧಾಳುಗಳು ಮುಡಿಗೇರಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ಎಸ್.ಡಿ.ಎಮ್ ಕಾಲೇಜು-ಉಜಿರೆ ಮೊದಲ ಸ್ಥಾನ ಮತ್ತು ಎಂ.ಎಸ್.ಆರ್.ಎಸ್ ಕಾಲೇಜು-ಶಿರ್ವ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಶಕ್ತಿವೇಲು ಇ, ಸಬ್ ಇನ್ಸ್ಪೆಕ್ಟರ್ ಆರಕ್ಷಕ ಠಾಣೆ, ಶಿರ್ವ ಇವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.