Friday, March 21, 2025
Homeಅಪರಾಧನಡುಬೀದಿಯಲ್ಲೇ 28 ವರ್ಷದ ಯುವಕನ ಅಟ್ಟಾಡಿಸಿ ಹತ್ಯೆ

ನಡುಬೀದಿಯಲ್ಲೇ 28 ವರ್ಷದ ಯುವಕನ ಅಟ್ಟಾಡಿಸಿ ಹತ್ಯೆ

ಹೈದರಾಬಾದ್: ಯುವಕನೋರ್ವನನ್ನು ನಡು ಬೀದಿಯಲ್ಲೇ ಗ್ಯಾಂಗೊಂದು ಓಡಿಸಿಕೊಂಡು ಹೋಗಿ ಅಟ್ಟಾಡಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ. ಹೈದರಾಬಾದ್‌ನ ಬಾಲಪುರ್ ಬಳಿ ಬರುವ ರಾಯಲ್ ಕಾಲೋನಿಯಲ್ಲಿ ಈ ಭೀಕರ ಹತ್ಯೆ ನಡೆದಿದ್ದು, ಕೊಲೆಯ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗೆ ಭೀಕರವಾಗಿ ಕೊಲೆಯಾದ ಯುವಕನನ್ನು 28 ವರ್ಷದ ಸೈಯದ್ ಸಮೀರ್ ಎಂದು ಗುರುತಿಸಲಾಗಿದೆ. ಜೂನ್ 13ರ ರಾತ್ರಿ ಈ ಘಟನೆ ನಡೆದಿದೆ.

ವೈರಲ್ ಆದ ವೀಡಿಯೋದಲ್ಲಿ ದುಷ್ಕರ್ಮಿಗಳು ಸೈಯದ್ ಸಮೀರ್‌ನನ್ನು ಅಟ್ಟಾಡಿಸಿಕೊಂಡು ಬಂದು ನೆಲಕ್ಕೆ ಬೀಳಿಸಿ ಬಳಿಕ ಚಾಕುವಿನಿಂದ ಇರಿದು ದೊಣ್ಣೆಯಿಂದ ಹೊಡೆದು ಕೊಲೆ ಮಾಡುವುದನ್ನು ವೈರಲ್‌ ಆದ ವೀಡಿಯೋದಲ್ಲಿ ಕಾಣಬಹುದಾಗಿದೆ. ಘಟನೆ ನಡೆಯುವ ವೇಳೆ ಅದೇ ಹಾದಿಯಲ್ಲಿ ಸಾರ್ವಜನಿಕರು ಹಾದು ಹೋಗುವುದನ್ನು ವೀಡಿಯೋದಲ್ಲಿ ನೋಡಬಹುದು. ಆದರೆ ದುಷ್ಕರ್ಮಿಗಳ ಕೈಯಲ್ಲಿದ್ದ ಆಯುಧವನ್ನು ಗಮನಿಸಿದ ಯಾರೊಬ್ಬರು ಘಟನೆಯಲ್ಲಿ ಮಧ್ಯ ಪ್ರವೇಶಿಸುವುದಕ್ಕೆ ಹಿಂಜರಿದಿದ್ದಾರೆ. 

ಘಟನೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹ್ಜಾದ್ ಪೂನಾವಾಲ ಖಂಡಿಸಿದ್ದಾರೆ. ಹೈದರಬಾದ್‌ನಲ್ಲಿ ಸಾರ್ವಜನಿಕರ ಎದುರೇ ಮಾಫಿಯಾವೊಂದು ಸೈಯದ್ ಸಮೀರ್‌ನನ್ನು ಭೀಕರವಾಗಿ ಹತ್ಯೆ ಮಾಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.  ಊಹಿಸಿಕೊಳ್ಳಿ, ಒಂದು ವೇಳೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಸಮೀರ್ ಹೀಗೆ ಹತ್ಯೆಯಾಗಿದ್ದಾರೆ ಅದು ವಿಶ್ವಸಂಸ್ಥೆಯನ್ನು ತಲುಪಿರಬಹುದು. ಆದರೆ ಇದು ತೆಲಂಗಾಣ.  ಜಾತ್ಯಾತೀತ ಕುರುಡುತನದಿಂದಾಗಿ ಈ ವಿಚಾರ ಯಾರು ಈ ಬಗ್ಗೆ ಗಮನ ಕೊಡುವುದಿಲ್ಲ ಎಂದು ಅವರು ಟ್ವಿಟ್ಟರ್‌ನಲ್ಲಿ ದೂರಿದ್ದಾರೆ. 

ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆ ಪಾತಕರ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದರೆ ಈ ಕೊಲೆಗೆ ಕಾರಣ ಏನೂ ಎಂಬುದು ಇನ್ನು ಸ್ಪಷ್ಟವಾಗಿಲ್ಲ, ಕೊಲೆ ಮಾಡಿದವರು ಹಾಗೂ ಕೊಲೆಯಾದವನಿಗೆ ಪರಿಚಯವಿದೆಯೋ ಅಥವಾ ಸಡನ್ ಆಗಿ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿ ಕೊಲೆಗೆ ಕಾರಣವಾಯ್ತ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆಯಾದ ಸೈಯದ್ ಸಮೀರ್ ಛಂಪೇಟ್ ಬಳಿಯ ಬಾಬಾ ನಗರದಲ್ಲಿ ಡೆಕೋರೇಷನ್ ಕೆಲಸ ಮಾಡುತ್ತಿದ್ದ. ಆದರೆ ನಿನ್ನೆ ಕೆಲಸ ಬಿಟ್ಟು ಮನೆಗೆ ಮರಳುವ ವೇಳೆ ಈ ಘಟನೆ ನಡೆದಿದ್ದು, ದಾಳಿಯ ನಂತರ ಸೈಯದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular