ಕುಂದಾಪುರ: ಈದ್ ಪ್ರಯುಕ್ತ ಖಾಸಗಿ ರೆಸಾರ್ಟ್ ನಲ್ಲಿ ಆಟವಾಡಲು ಹೋಗಿದ್ದ ಕುಟುಂಬವೊಂದರ ಬಾಲಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ನೀರಿನಲ್ಲಿ ಆಟವಾಡಲು ನೀರಿಗಿಳಿದ ನಾಲ್ಕನೇ ತರಗತಿಯ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ. ಹೆಂಗವಳ್ಳಿಯ ಖಾಸಗಿ ರೆಸಾರ್ಟ್ ವೊಂದಕ್ಕೆ ಮನೆಮಂದಿಯೊಂದಿಗೆ ಹತ್ತು ವರ್ಷದ ಮುಹಮ್ಮದ್ ಅರೀಝ್ ತೆರಳಿದ್ದ. ಈ ವೇಳೆ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನ ನೀರಿಗೆ ಬಿದ್ದ ಮುಹಮ್ಮದ್ ಅರೀಝ್ ಚಿಂತಾಜನಕ ಸ್ಥಿತಿಗೊಳಪಟ್ಟಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ. ರೆಸಾರ್ಟ್ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣವೆಂದು ದೂರಿನಲ್ಲಿ ಆಪಾದಿಸಲಾಗಿದೆ. ಈಜುಕೊಳದಲ್ಲಿ ಈಜಲು ಲೈಫ್ ಜಾಕೆಟ್, ಲೈಫ್ ಗಾರ್ಡ್ ಇರಲಿಲ್ಲವೆಂದು ದೂರಲಾಗಿದೆ. ಹೂಡೆಯ ದಾರುಸ್ಸಲಾಂ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಈತ ವಿದ್ಯಾಭ್ಯಾಸ ಮಾಡುತ್ತಿದ್ದ. ಶಾಲಾ ಆಡಳಿತ ಮಂಡಳಿ ಬಾಲಕನ ಸಾವಿಗೆ ಸಂತಾಪ ಸೂಚಿಸಿದೆ.