ಬೆಳ್ತಂಗಡಿ: ಬೈ ಹುಲ್ಲು ವ್ಯಾಪಾರಸ್ಥರೊಬ್ಬರು ತಮ್ಮ ಮಿನಿ ಲಾರಿಯಲ್ಲಿ ಬೈ ಹುಲ್ಲು ತರುವಾಗ ಏಕಾಏಕಿ ಬೆಂಕಿಹೊತ್ತಿಕೊಂಡ ಘಟನೆ ಬೆಳ್ತಂಗಡಿಯ ಕಳಿಯ ಗ್ರಾಮದ ಬಟ್ಟೆಮಾರು ಎಂಬಲ್ಲಿ ನಡೆದಿದೆ. ಹೈನುಗಾರಿಕೆ ಮಾಡುವ ಕೃಷಿಕರಿಗೆ ಮನೆಮನೆಗೆ ಬೈ ಹುಲ್ಲು ಮಾರುವ ಉದ್ದೇಶದಿಂದ ಹಾಸನದ ಸಕಲೇಶಪುರದಿಂದ ಬೈಹುಲ್ಲು ತರಲಾಗುತ್ತಿತ್ತು. ಬೆಂಕಿ ಹೊತ್ತಿಕೊಳ್ಳುತ್ತಲೇ ಸ್ಥಳೀಯರೊಬ್ಬರು ಬೊಬ್ಬೆ ಹಾಕಿ ಬೈಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ತಿಳಿಸಿದರು. ಆಗ ಲಾರಿಯವರು ತಕ್ಷಣವೇ ಲಾರಿ ನಿಲ್ಲಿಸಿ ಸ್ಥಳೀಯ ಪುರಂದರ ನಾಯ್ಕರವರ ಮನೆಯಿಂದ ಬೋರ್ ವೆಲ್ ನಿಂದ ನೀರು ಹರಿಸಿ ಬೆಂಕಿ ನಂದಿಸಲು ಪ್ರಯತ್ನಿಸಲಾಯಿತು. ಬಳಿಕ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರೂ ನೀರು ತಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಸ್ಥಳೀಯ ವಾರ್ಡ್ ಸದಸ್ಯರಾದ ಅಬ್ದುಲ್ ಕರೀಂ ಗೇರುಕಟ್ಟೆಯವರಿಗೆ ಮಾಹಿತಿ ದೊರೆತು ಅಗ್ನಿಶಾಮಕ ದಳದವರಿಗೆ ಕೂಡಲೇ ಸ್ಥಳಕ್ಕೆ ಬರಲು ಹೇಳಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದರು. ಪಂಚಾಯತ್ ಸಿಬ್ಬಂದಿ ರವಿ ಮತ್ತು ಸುರೇಶ್ ಗೌಡ ಕೂಡ ಸಹಕರಿಸಿದರು.