ತಮಿಳುನಾಡು : ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಚಲಿಸುತ್ತಿದ್ದ ರೈಲಿನಿಂದ ಹೊರಗಸೆದಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಕೊಯಮತ್ತೂರಿನಿಂದ ಚಿತ್ತೂರಿಗೆ ಪ್ರಯಾಣಿಸುತ್ತಿದ್ದ ಇಂಟರ್ಸಿಟಿ ರೈಲಿನಲ್ಲಿ ನಾಲ್ಕು ತಿಂಗಳ ಗರ್ಭಿಣಿಗೆ ಪುರುಷರ ಗುಂಪೊಂದು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಆಕೆಯನ್ನು ರೈಲಿನಿಂದ ಎಸೆದಿದ್ದಾರೆ. ಮಹಿಳಾ ಬೋಗಿಯಲ್ಲಿ ಘಟನೆ ನಡೆದಿದೆ.
ಮಹಿಳೆ ಕೊಯಮತ್ತೂರಿನಲ್ಲಿ ರೈಲು ಹತ್ತಿದ್ದಳು, ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಗೊತ್ತುಪಡಿಸಿದ್ದ ಮಹಿಳಾ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದಳು. ಆದರೆ, ಜೋಲಾರ್ಪೇಟೆಯಲ್ಲಿ ಆ ವಿಭಾಗದಲ್ಲಿ ಹತ್ತಿದ ಪುರುಷರ ಗುಂಪೊಂದು ಗರ್ಭಿಣಿಗೆ ತೊಂದರೆ ಕೊಟ್ಟಿದೆ. ಆಕೆ ಅವರ ಬಳಿ ಹೊರ ಹೋಗುವಂತೆ ಕೇಳಿಕೊಂಡರೂ ಕೂಡ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ತಿರುಪ್ಪೂರು ಜಿಲ್ಲೆಯ ಅವಿನಾಶಿಯ ಮಹಿಳೆ ಕೊಯಮತ್ತೂರಿನಿಂದ ತಿರುಪತಿಗೆ ತೆರಳುತ್ತಿದ್ದಾಗ ವೆಲ್ಲೂರು ಜಿಲ್ಲೆಯ ಕೆವಿ ಕುಪ್ಪಂ ಬಳಿ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.
ಮಹಿಳೆ ಶೌಚಾಲಯಕ್ಕೆ ಹೋದಾಗ ಆ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಆಕೆ ಸಹಾಯಕ್ಕಾಗಿ ಕಿರುಚಿದಾಗ, ದುಷ್ಕರ್ಮಿ ಯಾವುದೇ ಕರುಣೆ ತೋರಿಸದೆ ಆಕೆಯನ್ನು ರೈಲಿನಿಂದ ಕ್ರೂರವಾಗಿ ಎಸೆದನು. ಸಹಾಯಕ್ಕಾಗಿ ಮಹಿಳೆಯ ಕೂಗು ಕೇಳಿ ದಾರಿಹೋಕರು ಧಾವಿಸಿ ಬಂದು ಆಕೆಯನ್ನು ರಕ್ಷಿಸಿ ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಮಹಿಳೆಯ ಕೈ ಮತ್ತು ಕಾಲುಗಳಲ್ಲಿ ಮೂಳೆ ಮುರಿತಗಳಾಗಿದ್ದು, ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ಗುರುತಿನ ಆಧಾರದ ಮೇಲೆ ಕೆ.ವಿ. ಕುಪ್ಪಂ ಪ್ರದೇಶದ ಪೂಂಚೋಲೈ ಗ್ರಾಮದ ಹೇಮರಾಜ್ ಎಂಬ ಯುವಕನನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಮಹಿಳೆಯರಿಗೆ ಮಾತ್ರ ಪ್ರತ್ಯೇಕ ಬೋಗಿಗಳಿದ್ದರೂ, ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಟೀಕಿಸಲಾಗಿದೆ.