ಮಂಗಳೂರು: ತೀವ್ರ ಅನಾರೋಗ್ಯದ ನಡುವೆ ಆಸ್ಪತ್ರೆಯಿಂದ ಮನೆಗೆ ಬಂದು ಮತದಾನ ಮಾಡಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸೈನಿಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಬಂಟ್ವಾಳದ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು ಮತದಾನದ ತಮ್ಮ ಪವಿತ್ರ ಕರ್ತವ್ಯ ನಿರ್ವಹಿಸಿ ದೈವಾಧೀನರಾಗಿದ್ದಾರೆ. 83ರ ಹರೆಯದ ಮಾಧವ ಪ್ರಭು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭು ವೈದ್ಯರ ಅನುಮತಿ ಪಡೆದು ಮನೆಗೆ ಆಗಮಿಸಿ ಮತದಾನ ಮಾಡಿದ್ದರು. ಏ.15ರಂದು ಮತದಾನ ನಡೆಸಿದ್ದ ಅವರು ಮರಳಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.
ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್ ಸ್ಪೆಕ್ಟರ್ ಆಗಿದ್ದರು. ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ನಿವೃತ್ತಿಯ ನಂತರ ಪೂರ್ಣಾನಂದ ವಿವಿಧೊದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.