ಬೆಂಗಳೂರು: ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು ಬರುವಾಗ ಅವರನ್ನು ದುಷ್ಕರ್ಮಿಗಳು ಹೊಡೆದು ಹತ್ಯೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಿವೃತ್ತ ಶಿಕ್ಷಕ ಹನುಮಂತರಾಯಪ್ಪ ಅವರನ್ನು ಹೊಡೆದು ಕೊಲೆ ಮಾಡಿ ಅವರ ಬಳಿ ಇದ್ದ ಮೂರು ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದಾರೆ.
ಹನುಮಂತರಾಯಪ್ಪ ಅವರು ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯಿಂದ ಬಂದಿದ್ದ ಹಣವನ್ನು ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿಯ ಕೆನರಾ ಬ್ಯಾಂಕ್ನಿಂದ ಡ್ರಾ ಮಾಡಿಕೊಂಡು ಬರುತ್ತಿರುವಾಗ ದುಷ್ಕರ್ಮಿಗಳು ಅಡ್ಡಹಾಕಿ ದೊಣ್ಣೆಯಿಂದ ಹೊಡೆದ ಕೊಂದು ಹಣ ಸಮೇತ ಎಸ್ಕೇಪ್ ಆಗಿದ್ದಾರೆ.
ಮನೆಯನ್ನು ಕಟ್ಟಿಸುತ್ತಿದ್ದ ಶಿಕ್ಷಕ, ಸುಮಾರು ಮೂರು ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಒಂದಷ್ಟು ವಸ್ತುಗಳನ್ನು ಖರೀದಿಸಿ ಹೊರಟ್ಟಿದ್ದರು. ದುರಾದೃಷ್ಟವಶಾತ್ ಬ್ಯಾಂಕ್ ನಿಂದ ಹಿಂಬಾಲಿಸಿಕೊಂಡು ಬಂದ ಅಪರಿಚಿತ ಖದೀಮ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬೈಕ್ ನಿಂದ ಕೆಳಗೆ ಬೀಳುತ್ತಿದ್ದಂತೆ ದೊಣ್ಣೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿ ಹಣ ಎಗರಿಸಿ ಪರಾರಿಯಾಗಿದ್ದಾನೆ.
ಮೃತ ಹನುಮಂತರಾಯಪ್ಪರ ಏಕೈಕ ಪುತ್ರಿ ಹೇಮಲತಾಗೆ ಅಂತಾನೇ ತಮ್ಮ ನಿವೃತ್ತಿಯಿಂದ ಬಂದಿದ್ದ ಹಣದಲ್ಲಿ ಮನೆ ಕಟ್ಟಿಸಿ ಕೊಡುತ್ತಿದ್ದರು. ದೊಡ್ಡಬಳ್ಳಾಪುರದ ಕುರುಬರಹಳ್ಳಿಯಲ್ಲಿ ಮನೆ ಕಟ್ಟಲು ಪಾಯ ಹಾಕಲಾಗಿತ್ತು. ಆದ್ರೆ, ತ್ಯಾಮಗೊಂಡ್ಲು ಕೆನರಾ ಬ್ಯಾಂಕ್ ನಲ್ಲಿ ಹಣ ತಗೊಂಡು ಮನೆಗೆ ಬೇಕಾದ ರೇಷನ್, ಗ್ಯಾಸ್ ತಗೊಂಡು ಟಿವಿಎಸ್ ಮೊಪಡೆನಲ್ಲಿ ಬರುವಾಗ ದುಷ್ಕರ್ಮಿ ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ತ್ಯಾಮಗೊಂಡ್ಲು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಬಳಿಕ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.