ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರಿಗೆ ಜಾತಿ ನಿಂದನೆ ಮಾಡಿದ ಆರೋಪದಡಿ ಸಹದ್ಯೋಗಿಗಳ ವಿರುದ್ಧ ಮೈಕೋಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೊಫೆಸರ್ ಹಾಗೂ ಡೀನ್ ರಿಷಿಕೇಶ್ ಟಿ.ಕೃಷ್ಣನ್, ಸಹದ್ಯೋಗಿಗಳಾದ ದಿನೇಶ್ ಕುಮಾರ್, ಸೈನೇಶ್, ಶ್ರೀನಿವಾಸ ಪ್ರಕ್ಯಾ, ಚೇತನ್ ಸುಬ್ರಮಣ್ಯ, ಆಶ್ರಿಶ್ ಮಿಶ್ರಾ ಸೇರಿದಂತೆ 8 ಮಂದಿ ವಿರುದ್ಧ ಬಿಳೇಕನಹಳ್ಳಿಯಲ್ಲಿರುವ ಐಎಂಎಬಿ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕ ಗೋಪಾಲ್ ದಾಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೆಲಸ ಮಾಡುವ ವಾತಾವರಣದಲ್ಲಿ ಸಮಾನ ಅವಕಾಶ ನೀಡದೆ ಜಾತಿ ಭೇದ ಮಾಡಿ ವೈಷಮ್ಯ ಮೂಡಿಸಿದ್ದಾರೆ. ಅಲ್ಲದೆ, ಉದ್ದೇಶಪೂರ್ವಕವಾಗಿ ಜಾತಿಯನ್ನು ಹೇಳಿ ಪ್ರಚಾರ ಮಾಡುತ್ತಿದ್ದಾರೆ. ಕೆಲಸ ಮಾಡಲು ಅಡಚಣೆ ನೀಡಿ ಬೆದರಿಕೆ ಹಾಕುವ ಮೂಲಕ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಗೋಕುಲ್ ದಾಸ್ ಅವರು ವಿವರಿಸಿದ್ದಾರೆ.