ದಾವಣಗೆರೆ: ತುಂಬು ಕುಟುಂಬದಲ್ಲಿ ಸಂಸ್ಕೃತಿ, ಸಂಸ್ಕಾರಗಳ ಸಬಲೀಕರಣಕ್ಕೆ ಸ್ಪೂರ್ತಿ ಮಹಿಳೆ. ಸ್ತ್ರೀಯರು ಕೇವಲ ಅಡಿಗೆ ಮನೆಗೆ ಸೀಮಿತವಾಗದೇ ಅವರಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶ ಕಲಾಕುಂಚ ಸಂಸ್ಥೆಗೆ ಇದೆ. ಈ ಹಂತದಲ್ಲಿ ಸಾವಿರಾರು ಮಹಿಳೆಯರನ್ನು ಉಳಿಸಿ, ಬೆಳೆಸಿ ಅವರಲ್ಲಿನ ಖಿನ್ನತೆ ಮನಸ್ಸುಗಳನ್ನು ಪುಳಕಿತಗೊಳಿಸುವ ಈ ದಾವಣಗೆರೆ ಗೃಹಿಣಿ ಸ್ಪರ್ಧೆ ನಿಜಕ್ಕೂ ಶ್ಲಾಘನೀಯ ಎಂದು ಡಾ|| ಆರತಿ ಸುಂದರೇಶ್ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇತ್ತೀಚಿಗೆ ನಗರದ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ “ದಾವಣಗೆರೆ ಗೃಹಿಣಿ ಸ್ಪರ್ಧೆ”ಯ ಸಮಾರಂಭವನ್ನು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದ ಡಾ|| ಮಂಗಳಾ ಶೇಖರ್ ಮಾತನಾಡಿ, ಮಾನವ ಜೀವನ ಕೇವಲ ದುಡಿಮೆಗಷ್ಟೇ ಸೀಮಿತವಾಗದೆ ಪುರುಷರು, ಮಹಿಳೆಯರಿಗೆ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದರೆ ಇಡೀ ಮನೆತನವೇ ಸಂಸ್ಕೃತಿ, ಸಂಸ್ಕಾರದೊಂದಿಗೆ ಬೆಳೆಯುತ್ತಿರುತ್ತದೆ ಎಂದರು.
ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಾಡು, ನುಡಿಗಳ ವೈಭವೀಕರಣಕ್ಕೆ ಇಂತಹ ಚಟುವಟಿಕೆಗಳು ಪೂರಕ ಎಂದರು. ಸಂಧ್ಯಾ ಶ್ರೀನಿವಾಸ್ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಚಂದ್ರಶೇಖರ ಅಡಿಗ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಜ್ಯೋತಿ ಗಣೇಶ್ಶೆಣೈ, ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್, ಕಲಾಕುಂಚ ಡಿಸಿಎಂ ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ, ಎಲೆಬೇತೂರು ಶಾಖೆಯ ಅಧ್ಯಕ್ಷರಾದ ಡಾ|| ನಿರ್ಮಲಾ ಕುಲಕರ್ಣಿ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.
ಶಿಲ್ಪಾ ಉಮೇಶ್ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಲೀಲಾ ಸುಭಾಷ್ ವಂದಿಸಿದರು. ವಿವಿಧ ಪ್ರತಿಭಾವಂತ ಗೃಹಿಣಿಯರು “ದಾವಣಗೆರೆ ಗೃಹಿಣಿ ಸ್ಪರ್ಧೆ”ಯಲ್ಲಿ ಭಾಗವಹಿಸಿದರು.