ಉಡುಪಿ: ತುಳುನಾಡು ದೇಶ ನೆಲೆಸಿರುವ ಸೇರಿದಂತೆ ನಾನಾ ಮೂಲೆಗಳಲ್ಲಿ ತುಳುನಾಡಿನವರು ವರ್ಷಕೊಮ್ಮೆಯಾದರೂ ದೈವದ ನೇಮ, ತಂಬಿಲಕ್ಕೆ ಆಗಮಿಸಿ, ದೈವದ ಕೃಪೆಗೆ ಪಾತ್ರರಾಗುವ ಪರಿಪಾಠ ಬೆಳೆದು ಬಂದಿದೆ.
ಆದಿಉಡುಪಿಯಲ್ಲಿರುವ ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಪಾಕಿಸ್ತಾನ ಮೂಲದ ಕುಟುಂಬವೊಂದು ಇಂದು ಆಗಮಿಸಿ ಪೂಜೆ ಸಲ್ಲಿಸಿದೆ. ಪಾಕಿಸ್ತಾನದಲ್ಲಿ ಪೂರ್ವಿಕರನ್ನು ಹೊಂದಿ, ಉತ್ತರ ಭಾರತಕ್ಕೆ ವಲಸೆ ಬಂದಿದ್ದ ಕುಟುಂಬ ಇದಾಗಿದೆ. ಯೂಟ್ಯೂಬ್ನಲ್ಲಿ ತುಳುನಾಡಿನ ದೈವಗಳ ಬಗ್ಗೆ ತಿಳಿದು ಈ ಕುಟುಂಬದ ಸದಸ್ಯರು ಇಲ್ಲಿಗೆ ಆಗಮಿಸಿದ್ದಾರೆ.
ಸದ್ಯ ಮುಂಬೈನಲ್ಲಿ ನೆಲೆಸಿರುವ ಕುಟುಂಬವು ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ಸನ್ನಿಧಾನಕ್ಕೆ ಆಗಮಿಸಿ ದೈವಕ್ಕೆ ಸೇವೆ ಸಲ್ಲಿಸಿತು. ಈ ಕುಟುಂಬದ ಸದಸ್ಯನೊಬ್ಬ ದೈಹಿಕ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ. ಆದಿತ್ಯ ಸಿಂಘಾನಿಯಾ ಎಂಬ ಹೆಸರಿನ ಯುವಕ ಎಂಬಿಎ ಪದವೀಧರನಾಗಿದ್ದು ಕಾಯಿಲೆಯಿಂದಾಗಿ ಉದ್ಯೋಗ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಯುವಕ, ದೈವಕ್ಕೆ ಪೂಜೆ ಸಲ್ಲಿಸಿದ್ದಾನೆ. ಪೂಜೆಯ ಬಳಿಕ ದರ್ಶನ ಸೇವೆಯ ಮೂಲಕ ಸಂಕಷ್ಟ ಪರಿಹಾರಕ್ಕಾಗಿ ದೈವಕ್ಕೆ ಮೊರೆ ಇಟ್ಟಿದ್ದಾನೆ. ದೈವವು ಈ ಯುವಕನ ಕಾಯಿಲೆ ನಿವಾರಣೆಗೆ ಪೂಜೆಯ ಜೊತೆಗೆ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದೆ. ಧನಾತ್ಮಕ ಚಿಂತನೆಯೆಡೆಗೆ ಆಲೋಚನೆ ಇರಬೇಕು, ಮನಸ್ಸಿನಿಂದ ಭ್ರಮೆ- ದುರ್ಗುಣವನ್ನೆಲ್ಲ ಬಿಡು ಎಂದು ಸಲಹೆ ನೀಡಿ ತೀರ್ಥ ಸಂಪ್ರೋಕ್ಷಣೆ ಮಾಡಿದೆ.
ದರ್ಶನದಲ್ಲಿ ದೈವ ಪರಿಹಾರವನ್ನು ಸೂಚಿಸಿ, ಪ್ರಸಾದ ನೀಡಿದ್ದು, ಯುವಕ ಆದಿತ್ಯ ಸಿಂಘಾನಿಯಾಗೆ ಹೊಸ ಚೈತನ್ಯವನ್ನು ಮೂಡಿಸಿದೆ.