ಶಿವಮೊಗ್ಗ: ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯಸ್ನಾನ ಅಪವಿತ್ರಗೊಳಿಸುವ ಪ್ರಯತ್ನ ನಡೆದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತೊಂದರೆ ಕೊಟ್ಟವರು ಎಲ್ಲರೂ ಅನುಭವಿಸಿದ್ದಾರೆ. ಮುಂದೆಯೂ ಅನುಭವಿಸುತ್ತಾರೆ. ಗೋಶಾಲೆಗೆ ಗೋವುಗಳು ಬಾರದ ಹಿನ್ನೆಲೆ ಹೊಸ ಗೋ ಶಾಲೆ ಆರಂಭಿಸುವುದಿಲ್ಲ ಎಂದು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಈ ನಿರ್ಧಾರ ಹಿಂಪಡೆಯಬೇಕು. ಹಿಂದಿನ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಸ್ಥಾಪಿಸಬೇಕು ಎಂದು ನಿರ್ಧರಿಸಿತ್ತು. ಮದರಸಾ, ಉರ್ದು ಶಾಲೆಗಳಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚುತ್ತೀರಾ? ಎಂದು ಪ್ರಶ್ನಿಸಿದರು.
ಅಲ್ಲದೆ, ಮೃತ್ಯುಂಜಯ ನದಿಗೆ ಗೋ ಮಾಂಸದ ತ್ಯಾಜ್ಯ ಹಾಕಲಾಗಿದೆ. ಈ ನೀರು ನೇತ್ರಾವತಿ ನದಿಗೆ ಸೇರುತ್ತದೆ. ಧರ್ಮಸ್ಥಳದಲ್ಲಿ ಹಿಂದೂಗಳ ಪುಣ್ಯ ಸ್ನಾನವನ್ನು ಅಪವಿತ್ರಗೊಳಿಸುವ ಪ್ರಯತ್ನ ಇದು. ಗೋ ಹತ್ಯೆ ನಿಷೇಧವಿದ್ದರೂ ಇಷ್ಟೊಂದು ಗೋ ಮಾಂಸ ತ್ಯಾಜ್ಯ ಬಂದಿದ್ದು ಹೇಗೆ? ಹಿಂದೂ ಸಮಾಜಕ್ಕೆ ಮತ್ತು ನಂಬಿಕೆಗೆ ತೊಂದರೆ ಉಂಟು ಮಾಡುವವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ ಎಂದು ಈಶ್ವರಪ್ಪ ಪ್ರಶ್ನಿಸಿದರು.