
ಮನಾಮ, ಬಹರೈನ್ ದ್ವೀಪದೇಶ ಬಹರೈನ್ ನಲ್ಲಿ ಒಂದು ದಶಕದಿಂದಲೂ ತಾಯ್ನಾಡ ಕಲೆ,ಸಂಸ್ಕೃತಿಯನ್ನು ಪಸರಿಸುತ್ತಿರುವ ಕಲಾಸಂಘಟಕ ಮೋಹನದಾಸ್ ರೈ ಎರುಂಬು ಇವರ ಸ್ಥಾಪಕತ್ವದ ಅಮ್ಮ ಕಲಾವಿದರು ಬಹರೈನ್ ಇವರ ಸಂಯೋಜನೆಯಲ್ಲಿ ಕಳೆದ ಫೆಬ್ರವರಿ 14 ರಂದು ಸ್ಥಳೀಯ ಕಲಾವಿದರು ” ಮದಿಮೆದ ಇಲ್ಲಡ್” ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.

ತಾಯ್ನಾಡ ಖ್ಯಾತ ನಾಟಕಕಾರ ದಿನಕರ ಭಂಡಾರಿ ಕಣಂಜಾರು ರಚನೆಯ ಈ ನಾಟಕದ ಯಶಸ್ಸಿಗೆ ಕಾರಣರಾದ ನಿರ್ದೇಶಕ ಪುಷ್ಷರಾಜ್ ಶೆಟ್ಟಿ, ಗೌರವ ನಿರ್ದೇಶಕ ಹಾಗೂ ವಿಶೇಷ ಪಾತ್ರದಲ್ಲಿ ನಟಿಸಿದ ಮೋಹನದಾಸ್ ರೈ ಎರುಂಬು, ಸಂಗೀತ ನೀಡಿದ ತಾಯ್ನಾಡ ಪ್ರಸಿದ್ಧ ಯುವ ಸಂಗೀತನಿರ್ದೇಶಕ ಗುರು ಬಾಯಾರ್, ಸಲಹೆ/ಸಹಕಾರ ಕರುಣಾಕರ್ ಪದ್ಮಶಾಲಿ ಹಾಗೂ ಎಲ್ಲ ಕಲಾವಿದರು, ತಂತ್ರಜ್ಞರನ್ನು ನಾಟಕ ವೀಕ್ಷಿಸಿದ ಕಲಾಪ್ರೇಮಿಗಳು ಅಭಿನಂದಿಸಿದರು.
ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆದ ನಾಟಕವನ್ನು ಸುಮಾರು 600ಕ್ಕೂ ಮಿಕ್ಕಿದ ಪ್ರೇಕ್ಷಕರ ಮನಗೆದ್ದಿತು
.
ದ್ವೀಪದ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು,ಪ್ರತಿನಿಧಿಗಳು, ಕಲಾಪೋಷಕರು ಆಗಮಿಸಿ ಶುಭಹಾರೈಸಿದರು.
ಇದೇ ವೇದಿಕೆಯಲ್ಲಿ ಸಂಗೀತನಿರ್ದೇಶಕ ಗುರು ಬಾಯಾರ್ ,ನಾಟಕ ನಿರ್ದೆಶಕ ಪುಷ್ಪರಾಜ್ ಶೆಟ್ಟಿ ಇವರನ್ನು ಅತಿಥಿಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಎಲ್ಲ ಮುಖ್ಯಪ್ರಾಯೋಜಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅಮ್ಮ ಕಲಾವಿದರು ಬಹರೈನ್ ಇದರ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಮಜ್ಜಾರ್ ನಾಟಕದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಹಿರಿಯ ಸಂಘಟಕ, ಸ್ಥಾಪಕ ಮೋಹನದಾಸ್ ರೈ ಎರುಂಬು ಅಮ್ಮ ಕಲಾವಿದರು ಸಂಘಟನೆ ನಡೆದು ಬಂದ ಕುರಿತು ಮಾತನಾಡಿ ಮುಂದೆಯೂ ಸಂಸ್ಥೆಗೆ ಎಲ್ಲರ ಸಹಕಾರವನ್ನು ವಿನಂತಿಸಿದರು.
ಕಾರ್ಯಕ್ರಮ ನಿರೂಪಕ ಯಕ್ಷಿತ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.