ಮೂಡಿಗೆರೆ: ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿ ಜಲಪಾತಗಳಲ್ಲಿ ಸಂಯಮದಿಂದ ವರ್ತಿಸುವಂತೆ ಪೊಲೀಸರು ಪದೇಪದೇ ಎಚ್ಚರಿಕೆ ನೀಡುತ್ತಿದ್ದರೂ, ಪ್ರವಾಸಿಗರು ಮಾತ್ರ ತಮ್ಮದೇ ಚಾಳಿ ಮುಂದುವರಿಸುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ರಾಣಿಝರಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಗಡಿಪ್ರದೇಶದಲ್ಲಿರುವ ಬಂಡಾಜೆ ಫಾಲ್ಸ್ಗಳ ಬಳಿ ಪ್ರವಾಸಿಗರು ಬೇಜವಾಬ್ದಾರಿತನ ಮೆರೆಯುತ್ತಿರುವುದು ಕಂಡುಬಂದಿದೆ.
ಸಾವಿರಾರು ಅಡಿ ಎತ್ತರದಲ್ಲಿರುವ ಬಂಡಾಜೆ ಫಾಲ್ಸ್ನ ಅಂಚಿನಲ್ಲಿ ಕುಳಿತು ವ್ಯಕ್ತಿಯೊಬ್ಬ ಫೋಟೊ ಕ್ಲಿಕ್ಕಿಸಿಕೊಂಡಿರುವುದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ವೇಳೆ ಜಾರಿ ಬಿದ್ದರೆ ಆತನ ಹೆಣ ಕೂಡ ಸಿಗುವುದು ಕಷ್ಟ, ಒಂದು ವೇಳೆ ಸಿಕ್ಕರೂ ವಾರಗಟ್ಟಲೆ ಹುಡುಕಬೇಕಾಗಬಹುದು.
ಪೊಲೀಸರು, ಜಿಲ್ಲಾಡಳಿ ಎಷ್ಟೇ ಮನವಿ ಮಾಡಿದರೂ ಪ್ರವಾಸಿಗರು ತಮ್ಮ ಚೇಷ್ಟೆ ಕಡಿಮೆ ಮಾಡುತ್ತಿಲ್ಲ. ಮದ್ಯ ಸೇವಿಸಿ, ಗಾಂಜಾ ಹೊಡೆದು ಇಲ್ಲಿ ಪ್ರವಾಸಿಗರು ಅಟ್ಟಹಾಸ ಮೆರೆಯುತ್ತಿದ್ದಾರೆ. ಏನಾದರೂ ಅನಾಹುತವಾಗಿ ಪ್ರಾಣಾಪಾಯವಾದರೆ ಮುಂದೆ ಜನರು ಪೊಲೀಸರು, ಆಡಳಿತವನ್ನು ದೂರುತ್ತಾರೆ. ಆದರೆ ಇಂತಹ ಸಂದರ್ಭಗಳಲ್ಲಿ ಪೊಲೀಸರು, ಆಡಳಿತದ ಮಾತು ಕೇಳಲು ಯಾರೂ ಸಿದ್ಧರಿರುವುದಿಲ್ಲ.