Thursday, May 1, 2025
Homeಬಂಟ್ವಾಳಬಂಟ್ವಾಳ ಪುರಸಭೆ: ಸಾಮಾನ್ಯ ಸಭೆ ಕುಡಿಯುವ ನೀರಿನ ಸಮಸ್ಯೆ, ಜಿಲ್ಲಾಧಿಕಾರಿ ಭೇಟಿಗೆ ನಿರ್ಧಾರ

ಬಂಟ್ವಾಳ ಪುರಸಭೆ: ಸಾಮಾನ್ಯ ಸಭೆ ಕುಡಿಯುವ ನೀರಿನ ಸಮಸ್ಯೆ, ಜಿಲ್ಲಾಧಿಕಾರಿ ಭೇಟಿಗೆ ನಿರ್ಧಾರ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅವರಿಗೆ ಮರನವರಿಕೆ ಮಾಡಿಕೊಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪುರಸಭಾಧ್ಯಕ್ಷ ಕೆ.ವಾಸು ಪೂಜಾರಿ ಲೊರೆಟ್ಟೊ ಹೇಳಿದರು.

ಬಂಟ್ವಾಳ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದು, ತನಿಖೆಗೆ ಮಾತ್ರ ಸೂಚಿಸಲಾಗಿದೆ ಎಂದರು. ಪುರಸಭೆ ವ್ಯಾಪ್ತಿಯಲ್ಲಿ ಕಲುಷಿತ ನೀರು ಪೂರೈಕೆ, ಅಸಮರ್ಪಕ ತ್ಯಾಜ್ಯ ವಿಲೇವಾರಿ, ವಾಣಿಜ್ಯ ಸಂಕೀರ್ಣದ ಅಂಗಡಿ ಕೋಣೆಗಳ ಶಟರ್ ಸುಣ್ಣ-ಬಣ್ಣ ಇಲ್ಲದೆ ತುಕ್ಕು ಹಿಡಿಯುತ್ತಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಬೆಂಗಳೂರು ವಿಧಾನಸಭೆ ಅಧಿವೇಶನದಲ್ಲಿ ನಡೆದಿದೆ ಎನ್ನಲಾದ ಶಾಸಕ ಬಸವನಗೌಡ ಯತ್ನಾಳ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ನಡುವಿನ ಚೀಟಿ ವ್ಯವಹಾರ ಬಗ್ಗೆ ಸದಸ್ಯರೊಬ್ಬರು ಉಲ್ಲೇಖಿಸಿ, ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರಲ್ಲಿ ನಗು ತರಿಸಿದ ಪ್ರಸಂಗವೂ ನಡೆಯಿತು. ಸದಸ್ಯರಾದ ಎ.ಗೋವಿಂದ ಪ್ರಭು, ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಮಹಮ್ಮದ್ ನಂದರಬೆಟ್ಟು, ಸಿದ್ದಿಕ್ ಗುಡ್ಡೆಯಂಗಡಿ, ಇದ್ರಿಸ್, ಝೀನತ್ ಫಿರೋಜ್, ಹಸೈನಾರ್, ಹರಿಪ್ರಸಾದ್, ವಿದ್ಯಾವತಿ, ಜೆಸಿಂತಾ ಡಿಸೋಜ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ಮುನೀಶ್ ಆಲಿ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಸಮುದಾಯ ಸಂಘಟಕಿ ಉಮಾವತಿ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular