ವಿಟ್ಲ : ಜೋಕಾಲಿಯಲ್ಲಿ ಆಟ ಆಡುತ್ತಿದ್ದ ಮಗುವಿಗೆ ಹಗ್ಗ ಸುತ್ತಿ ಪ್ರಾಣಕಳೆದುಕೊಂಡ ಹೃದಯ ವಿದ್ರಾವಕ ಘಟನೆಯೊಂದು ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ಎಂಬಲ್ಲಿ ಡಿ.8 ರವಿವಾರ ಸಂಜೆ ನಡೆದಿದೆ. ಬುಡೋಳಿ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ ಮೃತ ಬಾಲಕಿ.
ಶೇರಾ ಶಾಲೆಯಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದುಕೊಂಡಿದೆ ಎನ್ನಲಾಗಿದೆ. ವಿಟ್ಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ನೀಡಿದ್ದಾರೆ.
ಮಕ್ಕಳು ಆಟವಾಡುತ್ತಿರುವಾಗ ಮನೆಯವರು ಮೈಯೆಲ್ಲ ಕಣ್ಣಾಗಿರುವ ಅಗತ್ಯ ಇದೆ. 2 ವರ್ಷದ ಹಿಂದೆ ಬಂಟ್ವಾಳ ತಾಲೂಕಿನ ಅನಂತಾಡಿ ಎಂಬಲ್ಲಿ 6ನೇ ತರಗತಿಯ ವಿದ್ಯಾರ್ಥಿನಿ ಇದೆ ರೀತಿ ಜೋಕಾಲಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿತ್ತು.ಮತ್ತೆ ಅದೇ ರೀತಿಯ ಹೃದಯವಿದ್ರಾವಕ ಘಟನೆ ಮರುಕಳಿಸಿದ್ದು, ಇನ್ನಾದರೂ ಮಕ್ಕಳು ಈ ರೀತಿ ಆಟವಾಡುವಾಗ ಪೋಷಕರು ಎಚ್ಚರವಹಿಸಬೇಕು.