ಬೆಂಗಳೂರು: ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಮಾನಸಿಕ ಅಸ್ವಸ್ಥನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಸದಾಶಿವನಗರ ಠಾಣಾ ವ್ಯಾಪ್ತಿ 8ನೇ ಕ್ರಾಸ್ನಲ್ಲಿ ನಡೆದಿದೆ. ವ್ಯಕ್ತಿಯನ್ನು ಹಿಡಿದು ಸದಾಶಿವನಗರ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ. ಸದ್ಯ ಆರೋಪಿ ಮಲ್ಲಿಕಾರ್ಜುನಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ನಿನ್ನೆ ಸಂಜೆ ಮನೆ ಮುಂಭಾಗ ಪಾರ್ಕ್ ಬಳಿ ಮಹಿಳೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬಿದ್ದಿದ್ದ ದೊಣ್ಣೆಯಿಂದ ಮಹಿಳೆ ತಲೆಗೆ ಬಲವಾಗಿ ಹೊಡೆಯಲಾಗಿದೆ. ಮಹಿಳೆ ಚೀರಾಟ ಕೇಳಿ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಕೂಡಾ ಇದೇ ರೀತಿ ಓರ್ವ ವ್ಯಕ್ತಿಗೆ ಮಲ್ಲಿಕಾರ್ಜುನ ಹೊಡೆದಿದ್ದ. ಆದರೆ ನ್ಯಾಯಾಲಯದಿಂದ ಮಲ್ಲಿಕಾರ್ಜುನ ಜಾಮೀನು ಪಡೆದಿದ್ದ.