ಬೆಂಗಳೂರು: ತುಂಡು ತುಂಡಾದ ಸ್ಥಿತಿಯಲ್ಲಿ ಮಹಿಳೆಯ ಕಾಲುಗಳು ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಕಾಡಂಚಿನ ಗ್ರಾಮ ಮುನಿಮಾರಾಯ್ಯನದೊಡ್ಡಿ ಸಮೀಪ ನಡೆದಿದೆ.
ಮಹಿಳೆಯನ್ನು ಕೊಲೆ ಮಾಡಿ ನಂತರ ಅನುಮಾನ ಬಾರದಿರಲಿ ಎಂದು ಹಂತಕರು ದೇಹವನ್ನು ಕತ್ತರಿಸಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕೆರೆ ಸಮೀಪವಿರುವ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಕಾಲುಗಳು ಪತ್ತೆಯಾಗಿವೆ. ಕಳೆದ ಹದಿನೈದು ದಿನಗಳ ಹಿಂದೆ ಇದೇ ಜಾಗದಲ್ಲಿ ಮಹಿಳೆಯ ಕೈ ಪತ್ತೆಯಾಗಿತ್ತು. ಇದೀಗ ಕೈ ಸಿಕ್ಕ ಜಾಗದ ಬಳಿಯಲ್ಲಿಯೇ ಮಹಿಳೆಯ ಎರಡು ಕಾಲುಗಳು ಸಿಕ್ಕಿವೆ.
ಇಂದು ಬೆಳಗ್ಗೆ ಗ್ರಾಮಸ್ಥರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಂತಕರು ಅಂಗಾಂಗಗಳನ್ನು ಕತ್ತರಿಸಿ ಬೇರೆ ಬೇರೆ ಕಡೆ ಎಸೆದು ಹೋಗಿದ್ದಾರೆ. ಸದ್ಯ ಪೊಲೀಸರು ಮಹಿಳೆಯ ಉಳಿದ ಅಂಗಾಂಗಳನ್ನು ಹುಡುಕಾಟ ನಡೆಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ಹಂತಕರ ಪತ್ತೆ ಮಾಡಲು ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ಸ್ಥಳಕ್ಕೆ ಶ್ವಾನದಳ, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.