ಗುರುಗಳ ತತ್ವ ಸಂದೇಶದಂತೆ ಒಗ್ಗಟ್ಟಿನೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸೋಣ : ಡಾ. ಹರಿಶ್ಚಂದ್ರ ಪಿ.ಸಾಲ್ಯಾನ್
ಮುಂಬಯಿ ಮಹಾನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಜನಪರ ಕಾರ್ಯಗಳೊಂದಿಗೆ ಉತ್ತಮ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ಇನ್ನಿತರ ಸೇವೆಗಳನ್ನು ಮಾಡುತ್ತಿದೆ. ಬಲಿಷ್ಠ ಸಮಿತಿಯನ್ನು ಹೊಂದಿರುವ ಹರೀಶ್ ಜಿ. ಅಮೀನ್ರವರ ಸಮರ್ಥ ನಾಯಕತ್ವದಲ್ಲಿ ಅಸೋಸಿಯೇಶನ್ ಹಮ್ಮಿಕೊಂಡ ಹಲವಾರು ಸಮಾಜಪರ ಯೋಜನೆಗಳು ಯಶಸ್ವಿಯಾಗಿ ಸಾಕಾರಗೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಮುಂದೆ ನಿಮ್ಮಿಂದ ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲುವಂತಾಗಲಿ. ಗುರುಗಳ ತತ್ವ ಸಂದೇಶದಂತೆ ನಾವೆಲ್ಲರೂ ಒಗ್ಗಟ್ಟನ್ನು ಕಾಪಾಡಿಕೊಂಡು ನಿಸ್ವಾರ್ಥವಾಗಿ ಸಮಾಜದ ಉನ್ನತಿಗಾಗಿ ಶ್ರಮಿಸೋಣ ಎಂದು ಇತ್ತೀಚೆಗೆ ಆರ್ಯಭಟ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಸಮಾಜ ಸೇವಕ, ‘ಹೊಸ ಅಂಗಣ’ ಮಾಸಿಕ ಪತ್ರಿಕೆಯ ಸಂಪಾದಕ ಮೂಲ್ಕಿ ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್ ಹೇಳಿದರು.
ಅವರು ಸೆ.೧೨ ರಂದು ಸಾಂತಾಕ್ರೂಸ್ ಬಿಲ್ಲವ ಭವನದ ಕಿರುಸಭಾಗ್ರಹದಲ್ಲಿ ಅಸೋಸಿಯೇಶನ್ನ ವತಿಯಿಂದ ನೀಡಿದ ಗೌರವಾರ್ಪಣೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಅಸೋಸಿಯೇಶನ್ನ ಅಧ್ಯಕ್ಷರಾದ ಹರೀಶ್ ಜಿ.ಅಮೀನ್ ಮಾತನಾಡಿ, ಅಸೋಸಿಯೇಶನ್ ಸಮಾಜದ ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಗೌರವಿಸುತ್ತಿದೆ. ಡಾ. ಸಾಲ್ಯಾನ್ರವರು ಓರ್ವ ಉತ್ತಮ ಸಂಘಟಕ. ಹಲವಾರು ಸಂಸ್ಥೆಗಳ ಮಾರ್ಗದರ್ಶಕರಾಗಿದ್ದು, ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಬಿರುದು ನೀಡಿ ಸನ್ಮಾನಿಸಿವೆ. ದಕ್ಷಿಣ ಕನ್ನಡ ರಾಜ್ಯೋತ್ಸವ ಹಾಗೂ ಆರ್ಯಭಟ ಪ್ರಶಸ್ತಿಗಳೂ ಲಭಿಸಿವೆ. ಇವರ ಹಲವಾರು ಉತ್ತಮ ಕೃತಿಗಳು ಲೋಕಾರ್ಪಣೆ ಗೊಂಡಿವೆ. ಇಂತಹ ಓರ್ವ ಸಜ್ಜನ ವಿದ್ವಾಂಸರನ್ನು ಗೌರವಿಸಲು ಸಂತೋಷವಾಗಿದೆ ಎಂದರು.
ಅಸೋಸಿಯೇಶನ್ನ ಜತೆ ಕಾರ್ಯದರ್ಶಿ ಕೇಶವ ಕೋಟ್ಯಾನ್ ಡಾ. ಸಾಲ್ಯಾನ್ರವರನ್ನು ಪರಿಚಯಿಸಿದರು. ಗೌ. ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಧರ್ಮಪಾಲ್ ಜಿ. ಅಂಚನ್, ಶಂಕರ್ ಡಿ. ಪೂಜಾರಿ, ಜತೆ ಕಾರ್ಯದರ್ಶಿ ರವಿ ಎಸ್.ಸನಿಲ್, ರವೀಂದ್ರ ಅಮೀನ್, ಡಾ. ರವಿರಾಜ್ ಸುವರ್ಣ, ಚಿತ್ರಾಪು ಕೆ.ಎಮ್. ಕೋಟ್ಯಾನ್, ರಾಮ ಅಮೀನ್, ನವೀನ್ಚಂದ್ರ ಅಮೀನ್, ಕೇಶವ ಪೂಜಾರಿ ದೇವೇಂದ್ರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.