ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಕಾರ್ಯಕ್ರಮದ ವೇಳೆ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ತಮ್ಮನ್ನು ಕರೆದಿಲ್ಲ ಎಂದು “ಬಿರುವೆರ್ ಕುಡ್ಲ” ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾರಾಯಣ ಗುರು ವೃತ್ತ ನಿರ್ಮಾಣಕ್ಕೆ ಇದ್ದ ವಿರೋಧ ಲೆಕ್ಕಿಸದೇ ಹೋರಾಡಿದ್ದು ನಾವು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ನಮ್ಮನ್ನು ಬನ್ನಿ ಎಂದೂ ಕರೆದಿಲ್ಲ. ಇದರಿಂದ ಬೇಸರವಾಗಿದೆ’’ ಎಂದು ಅವರು ಹೇಳಿದ್ದಾರೆ. ಬಿಲ್ಲವರು ಆರಾಧನೆ ಮಾಡುವುದು ಕುದ್ರೋಳಿ ಕ್ಷೇತ್ರವನ್ನು. ಅಲ್ಲಿನ ಅಧ್ಯಕ್ಷ ಸಾಯಿರಾಂ ಅವರನ್ನಾದರೂ ಆಹ್ವಾನಿಸಿದ್ದರೂ ಸಾಕಿತ್ತು. ನಮ್ಮ ಸಮುದಾಯದವರಿಗೂ ಈ ಬಗ್ಗೆ ತುಂಬಾ ಬೇಸರವಿದೆ ಎಂದು ಅವರು ತಿಳಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಬಿಜೆಪಿ ಅಥವಾ ಸಂಘದ ಮುಖಂಡರು ಹೋಗಿದ್ದರೆ ಬೇಸರವಿರಲಿಲ್ಲ. ಆದರೆ ಉದ್ಯಮಿಗಳು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ವೃತ್ತ ನಿರ್ಮಾಣವಾಗುವಾಗ ಸತೀಶ ಕುಂಪಲ ಎಲ್ಲಿದ್ದರು? ಬಿಲ್ಲವ ಸಮುದಾಯಕ್ಕೆ ಅವರ ಕೊಡುಗೆ ಏನು? ರಾಜಕೀಯಕ್ಕೆ ಬೇಕಾಗಿ ಏನು ಬೇಕಾದರೂ ಹೇಳಿಕೆ ನೀಡುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ ವಿರುದ್ಧ ಅವರು ತಮ್ಮ ಆಕ್ರೋಶ ಹೊರಹಾಕಿದರು.
ನಳಿನ್ ಅವರಿಗೆ ನನ್ನ ಬಗ್ಗೆ ಹೇಳಿ ಎಂದು ಸತೀಶ ಕುಂಪಲ ವಿಧಾನಸಭಾ ಚುನಾವಣೆಗೂ ಮೊದಲು ನನಗೆ ಫೋನ್ ಮಾಡುತ್ತಿದ್ದರು. ಆಗ ನಾವು ಬೇಕಾಗಿತ್ತು. ಈಗ ಬೇಡವಾಗಿದೆ. ಪಕ್ಷದ ಅಧ್ಯಕ್ಷ ಹುದ್ದೆ ಮೂರು ವರ್ಷ ಮಾತ್ರ. ನಂತರ ನಮ್ಮಂತೆಯೇ ಸಾಮಾನ್ಯ ಕಾರ್ಯಕರ್ತನಾಗಿರಬೇಕು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.