ಮಂಗಳೂರು: ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ದೃಷ್ಟಿಯಿಂದ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಮಹಿಳಾ ಮೋರ್ಚಾದವರು ದಾನಿಗಳ ಸಹಾಯದಿಂದ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯವಾದುದು. ಮಹಿಳೆಯರು ಆರ್ಥಿಕವಾಗಿ ಸದೃಢಗೊಳ್ಳಲು ಹೊಲಿಗೆ ಯಂತ್ರದ ಕೊಡುಗೆ ಬಹಳ. ಅವರು ತಮ್ಮ ಮನೆಯ ನಿರ್ವಹಣೆಯಲ್ಲದೇ ಸಾಮಾಜಿಕವಾಗಿಯೂ ಹೆಚ್ಚು ಜವಾಬ್ದಾರಿ ಹಾಗೂ ಕಳಕಳಿ ಹೊಂದಿರುವವರು. ಇಂತಹ ಸ್ವಾವಲಂಬಿ ತಾಯಂದಿರ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸಿದರು.
ರಮೇಶ್ ಕಂಡೆಟ್ಟು, ಪೂರ್ಣಿಮಾ, ವಿಜಯ್ ಕುಮಾರ್ ಶೆಟ್ಟಿ, ಪೂರ್ಣಿಮಾ ರಾವ್, ರವಿಶಂಕರ್ ಮಿಜಾರ್, ಅಜಯ್ ಕುಲಶೇಖರ, ಹರೀಶ್ ರೈ, ಶಬರಿ, ಕಮಲಾಕ್ಷಿ, ಸಂಧ್ಯಾ ವೆಂಕಟೇಶ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.