ಬಂಟ್ವಾಳ: ತಾಲೂಕಿನ ಬೋಳಂತೂರು ತುಳಸೀವನ ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯ ವತಿಯಿಂದ ನಡೆದ ಶ್ರೀ ಗಣೇಶೋತ್ಸವ ಮೆರವಣಿಗೆಯ ಸಂದರ್ಭ ಸಿಹಿತಿಂಡಿ ನೀಡದಂತೆ ಸ್ಥಳೀಯ ಮಸೀದಿಗೆ ನೀಡಿದ ಪತ್ರವೊಂದು ಈಗ ವೈರಲ್ ಆಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ.
ಕಳೆದ ವರ್ಷ ಮೆರವಣಿಗೆಯ ಸಂದರ್ಭ ತಮ್ಮ ಸಮಾಜ ಬಾಂಧವರು ಪಾನೀಯ ಹಾಗೂ ಸಿಹಿತಿಂಡಿ ವಿತರಿಸಿದ್ದು, ಇದರಿಂದ ನಮ್ಮ ಕೆಲವು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದರಿಂದ ಸಮಾಜದ ಸಾಮರಸ್ಯ ಕೆಡುವ ಆತಂಕವೂ ಇದೆ. ಹೀಗಾಗಿ ಇನ್ನು ಮುಂದೆ ಶೋಭಾಯಾತ್ರೆ ಸಂದರ್ಭ ಪಾನೀಯ, ಸಿಹಿತಿಂಡಿ ನೀಡದಂತೆ ಈ ಮೂಲಕ ವಿನಂತಿಸುತ್ತಿದ್ದೇವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಮಸೀದಿಗೆ ನೀಡಲಾದ ಈ ಮನವಿ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.