Friday, May 23, 2025
Homeಮಂಗಳೂರುಬಂದೂಕು ಠೇವಣಿ ವಿರುದ್ಧ ಅಭಿಯಾನ: 112ಕ್ಕೆ ಬಂತು ರೈತರ ಕರೆ; ವ್ಯಾಪಕ ಬೆಂಬಲ

ಬಂದೂಕು ಠೇವಣಿ ವಿರುದ್ಧ ಅಭಿಯಾನ: 112ಕ್ಕೆ ಬಂತು ರೈತರ ಕರೆ; ವ್ಯಾಪಕ ಬೆಂಬಲ

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇಡುವ ನೀತಿಯನ್ನು ವಿರೋಧಿಸಿ ಕೃಷಿಕರು ನಡೆಸುತ್ತಿರುವ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಾಣಿಗಳು ತಮ್ಮ ತೋಟಕ್ಕೆ ಬಂದಾಗ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡುವ ಕೃಷಿಕರ ಅಭಿಯಾನಕ್ಕೆ ಅದ್ಭುತ ಬೆಂಬಲ ವ್ಯಕ್ತವಾಗಿದೆ. ಮಲೆನಾಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ರೈತರು ಈ ಅಭಿಯಾನವನ್ನು ಬೆಂಬಲಿಸಿದ್ದಾರೆ. ರಾತ್ರಿ ಕರೆ ಮಾಡಿ ಹಂದಿ ಬಂದಿದೆ, ಇತರ ಕಾಡು ಪ್ರಾಣಿಗಳು ಬಂದಿವೆ ಎಂದು ಕೃಷಿಕರು 112ಕ್ಕೆ ಕರೆ ಮಾಡಿ ತಮ್ಮ ಬೆಳೆ ರಕ್ಷಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆಯ ವೇಳೆ ತಮ್ಮ ಬಂದೂಕು ಠಾಣೆಗಳಲ್ಲಿ ಠೇವಣಿ ಇಡಬೇಕೆಂಬ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನಕ್ಕೆ ಐವತ್ತಕ್ಕೂ ಅಧಿಕ ಕರೆಗಳು ಸಹಾಯವಾಣಿಗೆ ಬರುತ್ತಿವೆ. ಕೆಲವೊಬ್ಬರು ರಾತ್ರಿ 11 ಗಂಟೆ ನಂತರವೂ ಕರೆ ಮಾಡಿದ್ದು, ಅವುಗಳಿಗೆ ಸ್ಪಂದಿಸಲಾಗಿಲ್ಲ. 24 ಗಂಟೆ ತುರ್ತು ಸಹಾಯವಾಣಿಯ ಸೇವೆ ಇದೇ ರೀತಿ ಇರುತ್ತದೆಯೇ? ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದೀರ್ಘ ಅವಧಿಯ ಚುನಾವಣೆ ವೇಳೆ ಬಂದೂಕುಗಳನ್ನು ಠೇವಣಿ ಇರಿಸುವುದರಿಂದ ತಮ್ಮ ಕೃಷಿಗೆ ಕಾಡು ಪ್ರಾಣಿಗಳಿಂದ ಹಾನಿಯಾಗುತ್ತದೆ. ಇದರಿಂದ ತಮ್ಮ ಬೆಳೆಗೆ ನಷ್ಟವಾಗುತ್ತದೆ ಎಂಬುದು ಕೃಷಿಕರ ವಾದವಾಗಿದೆ. ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ನಡೆಸಿದ್ದ ರೈತ ಮುಖಂಡರು ಈ ಅಭಿಯಾನದ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದರು.

RELATED ARTICLES
- Advertisment -
Google search engine

Most Popular