ಚಾಮರಾಜನಗರ : ಬಸ್‌, ಲಾರಿ ನಡುವೆ ಅಪಘಾತ: 17 ಮಂದಿಗೆ ಗಾಯ, ಚಾಲಕ ಸ್ಥಳದಲ್ಲೇ ಮೃತ್ಯು

0
90

ಚಾಮರಾಜನಗರ : ತಾಲ್ಲೂಕಿನ ಬೆಂಡರವಾಡಿ ಸಮೀಪ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬಸ್ ಚಾಲಕ ಇರಸವಾಡಿ ಗ್ರಾಮದ ಮಂಜು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಕಾವುದವಾಡಿ ಹಾಗೂ ಬೇಡರಪುರ ಗ್ರಾಮದವರಾರದ ಶಿವಕುಮಾರ್, ಗೀತಾ, ನಿಂಗರಾಜು ಹಾಗೂ ಶಿವಕುಮಾರ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.ಅಪಘಾತದಲ್ಲಿ ಲಾರಿ ಚಾಲಕ ಸೇರಿ 17 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಬಸ್‌ ಹಾಗೂ ಚಾಮರಾಜನಗರದಿಂದ ಮೈಸೂರಿಗೆ ಗ್ರಾನೈಟ್‌ ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಬೆಂಡರವಾಡಿ ಗ್ರಾಮದ ಶಾಲೆಯ ಸಮೀಪ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಬಸ್‌ ಚಾಲಕನ ದೇಹ ವಾಹನದ ಬಿಡಿಭಾಗಗಳ ನಡುವೆ ಸಿಲುಕಿದ್ದರಿಂದ ದೇಹವನ್ನು ಹೊರತೆಗೆಯಲು ಪೊಲೀಸರು ಹಾಗೂ ಸಾರ್ವಜನಿಕರು ಪ್ರಯಾಸ ಪಡಬೇಕಾಯಿತು. ಎರಡು ತಾಸು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ ಚಾಲಕ ಕೊನೆಗೂ ಬದುಕುಳಿಯಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಅಪಘಾತದ ಪರಿಣಾಮ ಲಾರಿಯಲ್ಲಿ ತುಂಬಿದ್ದ ಗ್ರಾನೈಟ್‌ಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು , ಅಪಘಾತವಾದ ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ರಸ್ತೆಯ ಮೇಲೆ ಅಡ್ಡಲಾಗಿ ಬಿದ್ದಿದ್ದ ಗ್ರಾನೈಟ್‌ ತುಣುಕುಗಳನ್ನು ತೆರವುಗೊಳಿಸಲು ಸಹಾಯ ಮಾಡಿದರು.

‘ವಾಹನಗಳ ಡೀಸೆಲ್ ಟ್ಯಾಂಕ್‌ ಸೋರಿಕೆಯಾಗಿ ಅಪಾರ ಪ್ರಮಾಣದ ತೈಲ ರಸ್ತೆಗೆ ಸುರಿದಿದ್ದರಿಂದ ಬೆಂಕಿ ಅವಘಡ ಆತಂಕ ಎದುರಾಗಿತ್ತು. ಸ್ಥಳೀಯರ ಸಮಯ ಪ್ರಜ್ಞೆ ಹಾಗೂ ನೆರವಿನಿಂದ ಅಲ್ಪ ಸಮಯದಲ್ಲಿ ವಾಹನಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ’ ಎಂದು ಪೊಲೀಸರು ತಿಳಿಸಿದರು .

‘ಅಜಾರೂಕತೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಬಸ್‌ ಡ್ರೈವರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬಸ್‌ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದ ಸ್ಥಳಕ್ಕೆ ಬುಧವಾರ ಜಿಲ್ಲಾಧಿಕಾರಿ ರೂಪಾ ಭೇಟಿ ನೀಡಿ ಪರಿಶೀಲಿಸಿದರು. ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿ ಬೆಂಡರವಾಡಿ ಗ್ರಾಮಸ್ಥರ ಬಳಿ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರ ದೂರಿನಂತೆ ಮುಂದೆ ಅಪಘಾತಗಳು ಸಂಭವಿಸಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೂಪಾ ಸೂಚನೆ ನೀಡಿದರು.

ಬೆಳಗಿನ ಜಾವ ಹಾಗೂ ರಾತ್ರಿಯ ಹೊತ್ತು ಮಂಜು ಆವರಿಸಿಕೊಳ್ಳುತ್ತಿರುವುದರಿಂದ ರಸ್ತೆಯ ಮಧ್ಯೆ ಅಪಾಯಕಾರಿ ಹಾಗೂ ಅವೈಜ್ಞಾನಿಕವಾಗಿ ಡಿವೈಡರ್‌ಗಳ ಅಳವಡಿಕೆ ಮಾಡಿರುವುದು ಬ್ಲಾಕ್‌ಸ್ಪಾಟ್‌ಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದ ಪರಿಣಾಮ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿವೆ. ಕೂಡು ರಸ್ತೆಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ ಎಚ್ಚರಿಕೆಯ ಫಲಕಗಳು ಪ್ರತಿಫಲನ ಪಟ್ಟಿಗಳು ರಿಫ್ಲೆಕ್ಟರ್‌ ಸಹಿತ ಸುರಕ್ಷತಾ ಉಪಕರಣಗಳನ್ನು ಅಳವಡಿಕೆ ಮಾಡುವಂತೆ ಸವಾರರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here