ಚಿತ್ರದುರ್ಗ: ಮಕ್ಕಳಿಗೆ ಸಿಕ್ಕಿದ್ದೆಲ್ಲಾ ತಿನ್ನುವ ಆಸೆಯಾಗುತ್ತದೆ. ದೊಡ್ಡವರು ಯಾವುದು ತಿನ್ನಬೇಕು, ಯಾವುದು ತಿನ್ನಬಾರದು ಎಂದು ಹೇಳಿಕೊಡುತ್ತಾರೆ. ಆದರೂ ಕೆಲವೊಮ್ಮೆ ಇಂತಹ ಯಡವಟ್ಟುಗಳಾಗುತ್ತವೆ. ಇಲ್ಲೊಂದು ಕಡೆ ಬೇಲಿಯ ಮೇಲೆ ಬೆಳೆದಿದ್ದ ವಿಷದ ಕಾಯಿ ತಿಂದು ಆರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಆಟವಾಡುತ್ತಿದ್ದ ಮಕ್ಕಳು ವಿಷದ ಕಾಯಿ ತಿಂದಿದ್ದಾರೆ. ಪ್ರಕೃತಿ, ಮುಖೇಶ್, ಅನುಶ್ರೀ, ರಾಕೇಶ್, ಸಿಂಧು, ಮಹಾಲಕ್ಷ್ಮಿ ಎಂಬ ಮಕ್ಕಳು ವಿಷದ ಕಾಯಿ ತಿಂದು ಅಸ್ವಸ್ಥರಾಗಿದ್ದಾರೆ. ಕಾಯಿ ತಿಂದ ಬಳಿಕ ಮಕ್ಕಳಲ್ಲಿ ವಾಂತಿ, ಬೇಧಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಕ್ಕಳು ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.