ಬಾಗಲಕೋಟೆ: ಅನ್ಯಕೋಮಿನ ಯುವಕ-ಯುವತಿ ನಡುವಿನ ಪ್ರೇಮ ವಿವಾಹವೊಂದು ಹಿಂದೂ ಸಂಘಟನೆ ಹಾಗೂ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾದ ಘಟನೆ ಬಾಗಲಕೋಟೆಯ ನಗರಸಭೆ ಎದುರು ನಡೆದಿದೆ.
ಬಾದಾಮಿ ಮೂಲದ ಯುವಕ ಮತ್ತು ಯುವತಿ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದಾರೆ. ಬಳಿಕ ತಮಗೆ ರಕ್ಷಣೆ ಬೇಕೆಂದು ಕೋರಿ ಎಸ್ ಪಿ ಕಚೇರಿಗೆ ತೆರಳಿದ್ದಾರೆ. ವಿಷಯ ತಿಳಿದು ಸಂಘಟನೆ ಕಾರ್ಯಕರ್ತರು ಎಸ್ಪಿ ಕಚೇರಿಗೆ ಧಾವಿಸಿದ್ದಾರೆ. ಇದೇ ವೇಳೆ ಹುಡುಗಿಯ ಮನೆಯವರೂ ಬಂದಿದ್ದಾರೆ. ಅಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಯುವತಿಯ ಮನೆಯವರ ನಡುವೆ ವಾಗ್ವಾದ ಏರ್ಪಟ್ಟಿತ್ತು.
ಈ ವೇಳೆ ನವನಗರ ಪೊಲೀಸ್ ಠಾಣಾಧಿಕಾರಿ ರಾಮಣ್ಣ ಬಿರಾದಾರ್ ಎರಡೂ ಗುಂಪಿನವರನ್ನು ಚದುರಿಸಲು ಯತ್ನಿಸಿದ್ದಾರೆ. ಈ ವೇಳೆ ಕುಮಾರಸ್ವಾಮಿ ಎಂಬಾತ ಮತ್ತು ಬಿರಾದಾರ್ ನದುವೆ ವಾಗ್ವಾದ ಏರ್ಪಟ್ಟಿದೆ.
ಮದುವೆಗೆ ಒಪ್ಪದ ಹಿಂದೂ ಸಂಘಟನೆ ಕಾರ್ಯಕರ್ತರು ಸಿಪಿಐ ಬಿರಾದಾರ್ ವಿರುದ್ಧವೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗ ಪೊಲೀಸರ ಮೇಲೆ ಕಲ್ಲು ತೂರಾಟವೂ ನಡೆದಿದೆ. ಈ ವೇಳೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆಯಲು ಮುಂದಾದಾಗ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ತೆರಳಿ, ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್ಪಿ ಅಮರನಾಥ ರೆಡ್ಡಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಿದ್ದಾರೆ.