ಮೂಡುಬಿದಿರೆ ತಾಲೂಕಿನಲ್ಲಿ ಈ ವರ್ಷ ಅರ್ಹ ಪ್ರತಿಯೊಬ್ಬರಿಗೂ ಹಕ್ಕು ಪತ್ರ ನೀಡುವ ತನ್ನ ಕನಸಿನಂತೆ 310 ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲು ತಯಾರಿ ನಡೆಸಲಾಗಿದೆ. ತಾಲೂಕಿನಲ್ಲಿ ಪ್ರತಿಶತ 90 ರಷ್ಟು ಹಕ್ಕುಪತ್ರ ಪೂರ್ಣ ಗೊಂಡoತಾಗಿದೆ. ನಾಳೆ ಮಂಗಳವಾರ ಈ ಹಕ್ಕು ಪತ್ರಗಳನ್ನು ಆಡಳಿತ ಸೌಧದ ಸಭಾಭವನದಲ್ಲಿ ಶಾಸಕನಾಗಿ ನಾನು ವಿತರಿಸಲು ತೀರ್ಮಾನಿಸಿದ್ದೆ. ಆದರೆ ಕಾಂಗ್ರೆಸ್ ನ ಯಾರೋ ವ್ಯಕ್ತಿಗಳು ಅಧಿಕಾರಿಗಳಿಗೆ ತಡೆಯೊಡ್ಡಿ ಜಿಲ್ಲೆಯ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹಾಕಿ ಶುಕ್ರವಾರ ಸಚಿವರು ಈ ಹಕ್ಕು ಪತ್ರಗಳನ್ನು ವಿತರಿಸುವ ಬಗ್ಗೆ ನಿರ್ಧರಿಸಿರುವುದಾಗಿ ತಹಶೀಲ್ದಾರ್ ತಿಳಿಸಿರುವುದನ್ನು ಶಾಸಕ ಉಮಾನಾಥ್ ಕೋಟ್ಯಾನ್ ಶಾಸಕರ ಕಛೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ತಾನು ಶ್ರಮ ಪಟ್ಟು ತಯಾರಿಸಿದ, ಶಾಸಕರ ಹಕ್ಕು ಆಗಿರುವ ಹಕ್ಕು ಪತ್ರ ವಿತರಣೆಗೆ ಕಾಂಗ್ರೆಸ್ ವ್ಯಕ್ತಿಗಳು ತಡೆಯೋಡ್ಡುವ ಮೂಲಕ ಅಭಿವೃದ್ಧಿ ಕೆಲಸಗಳಲ್ಲಿ ರಾಜಕಾರಣ ಮಾಡುವ ಕುತಂತ್ರದ ಬಗ್ಗೆ ನೋವು ತೋಡಿಕೊಂಡರು. ಖುದ್ದು ಸಚಿವರಿಗೆ ಈ ಕುತಂತ್ರ ತಿಳಿದಿರಲಿಕ್ಕಿಲ್ಲ. ಮಾಜಿ ಸಚಿವ ಅಭಯ ಚಂದ್ರ ಜೈನ್ ಇಂತಹ ಕೆಲಸಕ್ಕೆ ಖಂಡಿತ ಕೈ ಹಾಕುವುದಿಲ್ಲ.
ಅಭಿವೃದ್ಧಿ ಕೆಲಸದಲ್ಲಿ ಅವರು ಎಲ್ಲಿಯೂ ಅಡ್ಡಿ ಮಾಡಿಲ್ಲ ಎನ್ನುತ್ತಲೇ ಕಾಂಗ್ರೆಸ್ ಇತರ ಮುಖಂಡರ ಮೇಲೆ ಚಾಟಿ ಬೀಸಿದರು. ನಾನು ಪ್ರಥಮ ಅವಧಿ ಶಾಸಕರಾಗಿ ಕ್ಷೇತ್ರದಲ್ಲಿ 2580 ಕೋಟಿ ರೂಪಾಯಿ ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಆದರೆ ಈ ಅವಧಿಯಲ್ಲಿ ಸರಕಾರ ಅನುಧಾನ ನೀಡದೇ ಸತಾಯಿಸುತ್ತಿದೆ.
ಜನಪ್ರತಿನಿಧಿಯಾಗಿ ಜನರು ಅಭಿವೃದ್ಧಿಗೆ ಅನುದಾನ ಕೇಳುವಾಗ ನೀಡಲಾಗುತ್ತಿಲ್ಲ. ಕಾಂಗ್ರೆಸ್ ಶಾಸಕರದ್ದು ಕೂಡ ಇದೇ ಗೋಳಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಮುಂದುವರಿದರೆ ಕೆಲವರು ಅಡ್ಡಿ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು. ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ್ ಪೂಜಾರಿ ಗೋಷ್ಠಿಯಲ್ಲಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರ್ ಈ ಸಂದರ್ಭದಲ್ಲಿದ್ದರು.