ಹೆಬ್ರಿ: ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಹಾಡಹಗಲೇ ಕಳವುಗೈಯ್ದು ಸಾಗಿಸುತ್ತಿದ್ದ ಒಬ್ಬನನ್ನು ಮತ್ತು ಅವರು ಬಳಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿರುವ ಘಟನೆ ನಾಡ್ಪಾಲು ಗ್ರಾಮದ ಬೆಳಾರ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಗೂಡ್ಸ್ ವಾಹನದಲ್ಲಿ ಹಬೀಬ್, ಬಶೀರ್, ಆಸಿಫ್ ಇಕ್ಬಾಲ್ ಎಂಬವರು ಜಾನುವಾರು ಕಳವು ಮಾಡಿಕೊಂಡು ಹೋಗುತ್ತಿದ್ದಾಗ ಸೋಮೇಶ್ವರ ವನ್ಯಜೀವಿ ವಲಯದ ಉಪವಲಯ ಅರಣ್ಯಾಧಿಕಾರಿ ಎಸ್. ಮೊಹಮ್ಮದ್ ಜುನೇದ್ ಅಖ್ತರ್ ವಾಹನ ತಡೆಗಟ್ಟಿ ನಿಲ್ಲಿಸುವಂತೆ ಸೂಚಿಸಿದರು. ವಾಹನ ನಿಲ್ಲಿಸದೆ ಅತಿವೇಗದಿಂದ ಚಲಾಯಿಸಿಕೊಂಡು ಹೋಗಿದ್ದು, ಅಜ್ಜೊಳ್ಳಿ ಸೇತುವೆ ಬಳಿ ಚಾಲಕ ಹಬೀಬ್, ಬಶೀರ್ ವಾಹನದಿಂದ ಜಿಗಿದು ಪರಾರಿಯಾಗಿದ್ದಾರೆ. ಆಸಿಫ್ ಇಕ್ಬಾಲ್, ಗೂಡ್ಸ್ ವಾಹನ, ಮೃತಪಟ್ಟ ಜಾನುವಾರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಾಗಿದೆ.