ಆಶಾ ಕಾರ್ಯಕರ್ತೆಯರು ನಗರ ಮತ್ತು ಹಳ್ಳಿಗಳಲ್ಲಿ. ಗ್ರಾಮದ ತಳಮಟ್ಟದಲ್ಲಿ ಆರೋಗ್ಯ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮ ನೈರ್ಮಲ್ಯ, ಸ್ವಚ್ಚತೆ, ಗರ್ಭಿಣಿ ಮಹಿಳೆಯರ ಆರೋಗ್ಯ, ಬಾಣಂತಿ ಮಗುವಿನ ಆರೋಗ್ಯ ಹೀಗೆ ಹಲವಾರು ರೀತಿಯಲ್ಲಿ ಕೆಲಸ ಮಾಡಿ ಗ್ರಾಮಗಳಲ್ಲಿ ಆಶಾಅಕ್ಕ ಆಗಿ ಜನರ ಮನಸ್ಸನ್ನು ಗೆದ್ದು ಮೆಚ್ಚುಗೆ ಪಡೆದಿದ್ದಾರೆ. ಆರೋಗ್ಯ ಸಂಸ್ಥೆಯ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ)ದ ಪ್ರಥಮ ಆಶಾ ರಾಜ್ಯ ಸಮ್ಮೇಳನವನ್ನು ದಿನಾಂಕ 13 ಮತ್ತು 14 ಸೆಪ್ಟೆಂಬರ್ 2024 ರಂದು ಕಲಬುರ್ಗಿಯಲ್ಲಿ ಸಂಘಟಿಸಲಾಗಿದೆ. ಇದರ ಅಂಗವಾಗಿ ರಾಜ್ಯ ಎಲ್ಲೆಡೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಆಶಾ ಕಾರ್ಯಕರ್ತೆಯರ ಜೀವನ ಭದ್ರತೆಗಾಗಿ, ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು, ಸಾರ್ವಜನಿಕ ಆರೋಗ್ಯವನ್ನು ಬಲಪಡಿಸಲು ಅಗತ್ಯ ಇರುವಷ್ಟು ಬಜೆಟ್ ಒದಗಿಸಲು ಹಾಗೂ ಸರ್ಕಾರವು ಅವರ ಪರವಾದ ನೀತಿಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ 31 ಆಗಸ್ಟ್ 2024ರಂದು ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವನ್ನು ಅಂಬೆಡ್ಕರ್ ಭವನ (ಉರ್ವಾ ಸ್ಟೋರ್)ದಲ್ಲಿ 11.30 ಘಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ.