ಕುಂದಾಪುರ: ಡಿ. 21ರಂದು ಸಂಜೆ ತ್ರಾಸಿ ಬೀಚ್ ಸಮುದ್ರ ತೀರದಲ್ಲಿ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಜಾಸ್ಕಿ ರೈಡರ್ ಶವ 36 ಗಂಟೆಗಳ ಬಳಿಕ ಸಮೀಪದ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆಯಾಗಿರುವುದು ತಿಳಿದುಬಂದಿದೆ.
ಜೆಟ್ ಸ್ಕೀ ರೈಡರ್ ರೋಹಿದಾಸ್ ಯಾನೆ ರವಿ (41) ಮೃತಪಟ್ಟವರಾಗಿದ್ದಾರೆ. ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಇವರು ಡಿ.23 ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಮೀನುಗಾರಿಕೆಗೆ ತೆರಳಲುತ್ತಿದ್ದಾಗ ಶವ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಸ್ಥಳೀಯ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿಗೆ ಮಾಹಿತಿ ನೀಡಿ, ಬಳಿಕ ಮೂವರು ಸೇರಿ ತೇಲುತ್ತಿದ್ದ ಶವ ಮೇಲೆಕ್ಕೆ ತಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಶವವನ್ನು ಇಬ್ರಾಹಿಂ ಗಂಗೊಳ್ಳಿ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕಕ್ಕೆ ಕೊಂಡೊಯ್ದಿದ್ದಾರೆ.
ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್ ನ ಜೆಟ್ ಸ್ಕೀ ಬೋಟ್ನಲ್ಲಿ ಸ್ಕೀ ರೈಡರ್ ಆಗಿದ್ದ ರೋಹಿದಾಸ್ ಶನಿವಾರ ಓರ್ವ ಪ್ರವಾಸಿಗನನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದರು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್ ಸ್ಕೀ ಮಗುಚಿ ಬಿದ್ದಿತ್ತು. ಈ ವೇಳೆ ಪ್ರವಾಸಿಗ ಪಾರಾಗಿದ್ದರೆ, ರೋಹಿದಾಸ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು.