ಬೆಳ್ತಂಗಡಿ: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಕಲ್ಮಂಜ ನಿಡಿಗಲ್ ಸಮೀಪ ಜ.16ರಂದು ತಡರಾತ್ರಿ ನಡೆದಿದೆ. ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ನಿವಾಸಿ ಮಿಥುನ್ ಕರ್ಕೇರ(25) ಮೃತಪಟ್ಟವರು.
ಯಾವುದೋ ಕಾರ್ಯಕ್ರಮಕ್ಕೆಂದು ಮಂಗಳೂರಿಗೆ ತೆರಳಿದ್ದ ಮಿಥುನ್ ಕರ್ಕೇರ ಅಲ್ಲಿಂದ ರಾತ್ರಿ ಹಿಂದಿರುಗುವ ವೇಳೆ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ಆಗಿ ರಸ್ತೆಗೆ ಉರುಳಿಬಿದ್ದಿದೆ.
ಈ ವೇಳೆ ತಲೆಭಾಗಕ್ಕೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಖಾಸಗಿ ಬಸ್ ಮತ್ತು ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಿಥುನ್ ಅವರು, ತಂದೆ-ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.