ಬೆಳ್ತಂಗಡಿ: ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಸ್ತೆಯ ಕಾಮಗಾರಿಯ ಗುತ್ತಿಗೆದಾರರು ಸ್ಥಳೀಯ ಹಲವಾರು ವರ್ತಕರು, ಉದ್ಯಮಿಗಳಿಗೆ ಮಾಡಿದ ವಂಚನೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಡಾ. ರವೀಂದ್ರ ಶೆಟ್ಟಿಯವರ ನೇತೃತ್ವದ ಪಟ್ಟು ಬಿಡದ ಹೋರಾಟಕ್ಕೆ ಜಯ ಸಿಕ್ಕಿದೆ.
ಘಟನೆಯ ವಿವರ:
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರೂ. 385 ಕೋಟಿ ವೆಚ್ಚದಲ್ಲಿ 35 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ ಟೆಂಡರ್ ಮಾಡಲಾಗಿತ್ತು. ಈ ಟೆಂಡರ್ ಮಹಾರಾಷ್ಟ್ರದ ನಾಗ್ಪುರದ ಡಿ.ಪಿ. ಜೈನ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.. ಕಂಪನಿಯು ರಸ್ತೆ ಕಾಮಗಾರಿಯನ್ನು 2023ನೇ ಸಾಲಿನಿಂದ ಆರಂಭಿಸಿತ್ತು. ಈ ವೇಳೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪೆಟ್ರೋಲ್ ಬಂಕ್ ಗಳಿಂದ ಡೀಸೆಲ್, ಪೆಟ್ರೋಲ್, ಕ್ರಷರ್ ಗಳಿಂದ ಜಲ್ಲಿ, ದಿನಸಿ ಅಂಗಡಿಗಳಿಂದ ಆಹಾರ ಸಾಮಗ್ರಿ, ಸ್ಟೇಷನರಿ ಸಾಮಗ್ರಿ, ಪೀಟೋಪಕರಣ ಹೀಗೇ ಹಲವಾರು ಸಾಮಗ್ರಿಗಳನ್ನು ಈ ಕಂಪನಿ ಸಾಲದ ರೂಪದಲ್ಲಿ ಪಡೆದಿತ್ತು. ಇದೊಂದು ದೊಡ್ಡ ಕಂಪನಿ ಎಂದು ಭಾವಿಸಿ ಎಲ್ಲರೂ ಸಾಮಗ್ರಿಗಳನ್ನು ನೀಡಿದ್ದರು.
ವಂಚನೆಯ ಸುಳಿವು:
ಆದರೆ ತಾವು ನೀಡಿದ ಸಾಮಗ್ರಿಗಳ ಬಿಲ್ಲು ಈ ತಿಂಗಳಿಗೆ ಪಾವತಿ ಆಗುತ್ತೆ, ಮುಂದಿನ ತಿಂಗಳು ಪಾವತಿ ಆಗುತ್ತೆ ಎಂದು ಕಾದು ಕೂತವರಿಗೆ ಹಣ ಸಿಗಲೇ ಇಲ್ಲ. ಈ ಕಂಪನಿಯ ಯಾರಲ್ಲಿ ಕೇಳಿದರೂ ಕೂಡ ಹಣ ಮಾತ್ರ ಬರಲೇ ಇಲ್ಲ. ಕೆಲವರು ನಾಗ್ಪುರದಲ್ಲಿರುವ ಡಿ ಪಿ ಜೈನ್ ಕಂಪನಿಗೆ ತೆರಳಿ ತಮ್ಮ ಹಣ ನೀಡುವಂತೆ ಕೇಳಿದರೂ, ಅವರನ್ನು ತೆಪ್ಪಗೆ ಹಿಂದಕ್ಕೆ ಕಳುಹಿಸಲಾಗಿತ್ತು. ಇದರಿಂದ ಜನ ಹೈರಾಣಾಗಿ ಹೋಗಿದ್ದರು. ತಮ್ಮ ಸಮಸ್ಯೆ ಪರಿಹಾರ ಮಾಡುವುದು ಹೇಗೆ ಎಂದೇ ಯಾರಿಗೂ ತಿಳಿಯದೆ ಚಿಂತೆಯಲ್ಲಿದ್ದರು.
ಡಾ. ರವೀಂದ್ರ ಶೆಟ್ಟಿ ಎಂಟ್ರಿ :
ಈ ವಂಚನೆಯ ಮಾಹಿತಿಯನ್ನು ಕ್ರಷರ್ ಮಾಲಕರೊಬ್ಬರು ರಾಜ್ಯ ಕ್ರಷರ್ ಮಾಲಕರ ಸಂಘದ ರಾಜ್ಯ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿಯವರಲ್ಲಿ ತಿಳಿಸಿ, ತಮ್ಮ ಸಮಸ್ಯೆ ಪರಿಹಾರ ಮಾಡುವಂತೆ ಮನವಿ ಮಾಡಿದರು.
45 ಜನರ ತಂಡ ನಾಗ್ಪುರಕ್ಕೆ:
ಈ ಬಗ್ಗೆ ಹೋರಾಟದ ಅವಶ್ಯಕತೆ ಮನಗಂಡ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಸುಮಾರು 45 ಜನರ ತಂಡವನ್ನು ನಾಗ್ಪುರಕ್ಕೆ ಕೊಂಡೊಯ್ಡರು. ನಾಗ್ಪುರಕ್ಕೆ ತೆರಳಿದ ಈ ತಂಡವು ಡಿ ಪಿ ಜೈನ್ ಕಂಪನಿಗೆ ಹೋಗಿ ವಂಚನೆ ಮಾಡಿದ ಹಣ ನೀಡುವಂತೆ ಮನವಿ ಮಾಡಿತು. ಆದರೆ ಅಲ್ಲಿ ಆಗಲೂ ಕಂಪನಿ ಸಿಬ್ಬಂದಿ ಮಾತ್ರ ಇದ್ದು ಹಣ ನೀಡುವ ನಿಟ್ಟಿನಲ್ಲಿ ಯಾವುದೇ ಮಾತುಕತೆ ಮಾಡಲಿಲ್ಲ. ಇದರಿಂದ ಕೆರಳಿದ ಡಾ. ರವೀಂದ್ರ ಶೆಟ್ಟಿ ಬಜಗೋಳಿಯವರು ಹಾಗೂ ತಂಡವು ಕಚೇರಿಯೊಳಗೆ ನೆಲದಲ್ಲಿ ಕುಳಿತು ಧರಣಿ ಆರಂಭಿಸಿತು.
ಬೆಳಗ್ಗೆ ಆರಂಭ ಆದ ಧರಣಿ ನಿರತರ ಮನ ಒಲಿಸಲು ಕಂಪನಿ ಪ್ರಯತ್ನ ಪಟ್ಟರೂ, ಎಲ್ಲರ ಹಣ ಸಿಗುವವರೆಗೂ ತಾವು ಕದಲೋದಿಲ್ಲ ಎಂದು ಡಾ. ರವೀಂದ್ರ ಶೆಟ್ಟಿ ಪಟ್ಟು ಬಿಡಲೇ ಇಲ್ಲ. ಸುಮಾರು ಮದ್ಯಾಹ್ನ ಹೊತ್ತಿಗೆ ಈ ಕಂಪನಿಯ ಮುಖ್ಯಸ್ಥರು ಡಾ ರವೀಂದ್ರ ಶೆಟ್ಟಿಯವರ ಬಳಿ ಬಂದು ಮಾತುಕತೆ ಮಾಡುವಂತೆ ತಿಳಿಸಿದರು. ಆದರೆ ವಂಚನೆಗೆ ಒಳಗಾದವರಿಗೆ ಹಣ ಕೊಡದಿದ್ದರೆ, ಎಷ್ಟು ದಿನ ಆದರೂ ತಾವು ಇಲ್ಲಿಂದ ಕದಲೋದಿಲ್ಲ ಎಂದು ತಿಳಿಸಲಾಯಿತು.
ಬಿಜೆಪಿ ಶಾಸಕ ಮೋಹನ್ ಮತೆ ಸ್ಥಳಕ್ಕೆ:
ವಿಚಾರ ತಿಳಿದ ನಾಗ್ಪುರದ ಶಾಸಕರಾದ ಮೋಹನ್ ಮತೆ ಸ್ಥಳಕ್ಕೆ ಆಗಮಿಸಿ, ಡಾ. ರವೀಂದ್ರ ಶೆಟ್ಟಿಯವರ ಮನ ಒಲಿಸುವ ಪ್ರಯತ್ನ ಮಾಡಿದರು. ಬಳಿಕ ಅಲ್ಲಿಂದ ಶಾಸಕರು ಕರ್ನಾಟಕದ ಬಿಜೆಪಿ ಜನಪ್ರತಿನಿಧಿಗಳನ್ನು ಹಾಗೂ ನಾಗ್ಪುರದಲ್ಲಿರುವ ಸುರತ್ಕಲ್ ನ ನವೀನ್ ಶೆಟ್ಟಿಯವರ ಮುಖಾಂತರ ಹೋರಾಟಗಾರರ ಮನ ಒಲಿಸುವ ಪ್ರಯತ್ನ ಮಾಡಿದರು. ಬಳಿಕ ಶಾಸಕ ಮೋಹನ್ ಮತೆಯವರು ಡಿ ಪಿ ಜೈನ್ ಕಂಪನಿಯ ಜೊತೆಗೆ ಡಾ. ರವೀಂದ್ರ ಶೆಟ್ಟಿಯವರ ಮೂಲಕ ಮಾತುಕತೆ ಮಾಡಿಸಿದರು. ವಂಚನೆ ಆದವರಿಗೆ ಹಣ ನೀಡಿದ್ರೆ ಮಾತ್ರ ತಾವೆಲ್ಲರೂ ಇಲ್ಲಿಂದ ತೆರಳುವುದಾಗಿ ತಿಳಿಸಲಾಯಿತು.
ಕೊನೆಗೆ ಡಿ ಪಿ ಜೈನ್ ಕಂಪನಿಯು ಹಣ ನೀಡುವುದಾಗಿ ಒಪ್ಪಿಕೊಂಡಿದೆ. ಡಾ. ರವೀಂದ್ರ ಶೆಟ್ಟಿಯವರ ಪಟ್ಟುಬಿಡದ ಹೋರಾಟದ ಜೊತೆಗೆ ಹಲವಾರು ಮಂದಿ ಜೊತೆಗೂಡಿ ಈ ಹೋರಾಟಕ್ಕೆ ಯಶಸ್ಸು ದೊರಕಿದೆ.