ಎಳ್ಳಾರೆ : ಮಲ್ಲಿಗೆ ಕೃಷಿಯ ರೈತ ಕ್ಷೇತ್ರ ಪಾಠಶಾಲೆ
ಹೆಬ್ರಿ : ಮಲ್ಲಿಗೆ ಕೃಷಿಯನ್ನು ಎಲ್ಲರೂ ಸರಿಯಾದ ಪಾಲನೆಯಿಂದ ಮಾಡಿದಾಗ ದಿನನಿತ್ಯದ ಆದಾಯವನ್ನು ಗಳಿಸಬಹುದು ಎಂದು ಚಾರದ ಪ್ರಗತಿಪರ ಮಲ್ಲಿಗೆ ಕೃಷಿಕ ಸತೀಶ್ ನಾಯ್ಕ್ ಹೇಳಿದರು.
ಅವರು ಹೆಬ್ರಿ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುದ್ರಾಡಿ ವಲಯದ ಎಳ್ಳಾರೆ ದೇವಸ್ಥಾನದ ಬಳಿ ನಡೆದ ಮಲ್ಲಿಗೆ ಕೃಷಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಲ್ಲಿಗೆ ಕೃಷಿಯ ಮಾಹಿತಿ ನೀಡಿದರು.
ದಿನನಿತ್ಯದ ಆದಾಯಕ್ಕೆ ಮಲ್ಲಿಗೆ ಬಹಳ ಪೂರಕವಾಗಿದೆ, ರೈತರು ಹೆಚ್ಚು ಮಲ್ಲಿಗೆ ಕೃಷಿಯನ್ನು ಅಳವಡಿಸಿಕೊಂಡಾಗ ಆದಾಯವನ್ನು ಗಳಿಸಲು ಸಾಧ್ಯ ಎಂದು ಸತೀಶ್ ನಾಯ್ಕ್ ತಿಳಿಸಿದರು.
ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಅಧ್ಯಕ್ಷರಾದ ಪ್ರಗತಿಪರ ಕೃಷಿಕ ಫ್ರಾನ್ಸಿಸ್ ಡಿಸೋಜಾ ಮಲ್ಲಿಗೆ ಗಿಡಗಳ ಆಯ್ಕೆ ನಾಟಿ, ನಿರ್ವಹಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ದೇವೇಂದ್ರ ಕಾಮತ್ ಮಲ್ಲಿಗೆ ಕೃಷಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಉದ್ಘಾಟಿಸಿದರು.
ಮಲ್ಲಿಗೆ ಬೆಳೆಗಾರರಾದ ವಿಠಲ, ಯೋಜನೆಯ ಮೇಲ್ವಿಚಾರಕಿ ಸುಮಲತಾ, ಕೃಷಿ ಅಧಿಕಾರಿ ಉಮೇಶ್ ಬಿ.ಕೆ, ಸೇವಾ ಪ್ರತಿನಿಧಿ ಹೇಮಾ, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.