ಹೈದರಾಬಾದ್: 10ನೇ ತರಗತಿವರೆಗೆ ತೆಲುಗು ಮಾಧ್ಯಮದಲ್ಲಿ ಓದಿದ ಬಾಲಕಿಯೊಬ್ಬಳು 11ನೇ ತರಗತಿಯ (ಪ್ರಥಮ ಪಿಯುಸಿ) ಇಂಗ್ಲಿಷ್ ಮಾಧ್ಯಮದ ಪಾಠ ಅರ್ಥ ಆಗುತ್ತಿಲ್ಲವೆಂದು ಅತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನೆರೆಯ ತೆಲಂಗಾಣದಲ್ಲಿ ನಡೆದಿದೆ. ಮಂಚಿರ್ಯಾಲ ಜಿಲ್ಲೆಯ ಭೀಮಾರಂ ಮಂಡಲದ ಪೋತನಪಲ್ಲಿಯ 16 ವರ್ಷದ ಅನುಶ್ರೀ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ಆತ್ಮಹತ್ಯೆ ಮಾಡಿಕೊಂಡ ಅನುಶ್ರೀ ಪೋತನಪಲ್ಲಿಯ ನಲತುಕುರಿ ಬನೇಶ್ ಮತ್ತು ಕವಿತಾ ದಂಪತಿಯ ಹಿರಿಯ ಪುತ್ರಿ. ಈಕೆ 10ನೇ ತರಗತಿ ತನಕ ತೆಲುಗು ಮಾಧ್ಯಮದಲ್ಲಿ ಓದಿದ್ದಳು. ದ್ವಿತೀಯ ಪಿಯುಸಿಗೆ ರಾಮಕೃಷ್ಣಾಪುರದ ಕಸ್ತೂರ್ಬಾ ಕಾಲೇಜಿನಲ್ಲಿ ಇಂಗ್ಲಿಷ್ ಮೀಡಿಯಂಗೆ ಸೇರಿದ್ದಳು.
ಪ್ರಕರಣದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿ, ʼʼಬನೇಶ್ ಮತ್ತು ಕವಿತಾ ದಂಪತಿಯ ಹಿರಿಯ ಪುತ್ರಿ ಅನುಶ್ರೀ 10ನೇ ತರಗತಿ ತನಕ ತೆಲುಗು ಮಾಧ್ಯಮದಲ್ಲಿ ಅಧ್ಯಯನ ನಡೆಸಿದ್ದಳು. ದ್ವಿತೀಯ ಪಿಯುಗೆ ಆಕೆ ಸೇರಿದ್ದು ಇಂಗ್ಲಿಷ್ ಮಾಧ್ಯಮ ಕಾಲೇಜಿಗೆ. ಅಲ್ಲಿಯವರೆಗೆ ತೆಲುಗು ಮಾಧ್ಯಮದಲ್ಲಿ ಓದಿದ್ದ ಅನುಶ್ರೀ ಇಂಗ್ಲಿಷ್ ಪಾಠ ಕಷ್ಟವಾಗ ತೊಡಗಿತ್ತುʼʼ ಎಂದು ತಿಳಿಸಿದ್ದಾರೆ.
ʼʼಇದರಿಂದ ಆಕೆ ಚಿಂತೆಗೆ ಒಳಗಾಗಿದ್ದಳು. ಪಾಠ ಅರ್ಥ ಆಗುತ್ತಿಲ್ಲ ಎಂದು ಆಗಾಗ ನೋವು ತೋಡಿಕೊಳ್ಳುತ್ತಿದ್ದಳು. ತನಗೆ ಇಂಗ್ಲಿಷ್ ಬರುವುದಿಲ್ಲ, ತರಗತಿ ಸರಿಯಾಗಿ ಅರ್ಥವಾಗುತ್ತಿಲ್ಲ, ತೆಲುಗು ಮಾಧ್ಯಮಕ್ಕೆ ಸೇರಿಸಬೇಕೆಂದು ತಂದೆಯ ಬಳಿ ಹಲವು ಬಾರಿ ಮನವಿ ಮಾಡಿದ್ದಳು. ಈ 1 ವರ್ಷ ಕಳೆಯಲಿ, ದ್ವಿತೀಯ ಪಿಯುಸಿಗೆ ತೆಲುಗು ಮಾಧ್ಯಮಕ್ಕೆ ಸೇರಿಸುತ್ತೇನೆ ಎಂದು ತಂದೆ ಸಮಾಧಾನಪಡಿಸಿದ್ದರು. ಆದರೆ ಅಷ್ಟರಲ್ಲಿ ಅನುಶ್ರೀ ದುಡುಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆʼʼ ಕುಟುಂಬದ ಮೂಲಗಳು ತಿಳಿಸಿವೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅನುಶ್ರೀ ಕೃಷಿಗೆ ಸಿಂಪಡಿಸುವ ಔಷಧ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಮಂಚೇರಿಯಾಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಆಕೆಯನ್ನು ಕರೀಂನಗರದ ಖಾಸಗಿ ಆಸ್ಪತೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ.