ಕನ್ನಡದ ಮತ್ತೊಬ್ಬ ಕಿರುತೆರೆ ಹಾಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡೊಂದ್ಲಾ ಮೂರು, ಎಟಿಎಮ್ , ಒಂದ್ ಕಥೆ ಹೇಳ್ಲಾ, ಜಾಕ್ ಪಾಟ್, ಅಪಾರ್ಟ್ಮಂಟ್ ಟು ಮರ್ಡರ್, ವಂದನಾ ಸಿನಿಮಾದಲ್ಲಿ ನಟಿಸಿದ್ದರು.
ಇನ್ನು ಕಿರುತೆರೆಯಲ್ಲಿ ಬ್ರಹ್ಮಗಂಟು ಹಾಗೂ ನಿನ್ನಿಂದಲೇ ಧಾರಾವಾಹಿಯಲ್ಲಿ ಸಹ ನಟಿಸಿದ್ದರು. ಇದೀಗ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಾ ನೆಲೆಸಿದ್ದರು. ಕಳೆದ ವರ್ಷ ಮದುವೆ ಮಾಡಿಕೊಂಡಿದ್ದ ಶೋಭಿತಾ ಶಿವಣ್ಣ ಅರು ಇದೀಗ ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕದ ಹಾಸನ ಮೂಲದ ಸಕಲೇಶಪುರದ ನಟಿ ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿರೊ ಮಾಹಿತಿ ಇದೆ. ಸದ್ಯ ಫಸ್ಟ್ ಡೇ ಫಸ್ಟ್ ಶೋ ಸಿನಿಮಾದಲ್ಲಿ ನಟಿ ಶೋಭಿತಾ ಶಿವಣ್ಣ ನಟಿಸಿದ್ದರು. ಕಳೆದ ಎರಡುವರ್ಷಗಳ ಹಿಂದೆ ಹೈದರಾಬಾದ್ನಲ್ಲಿ ಮದುವೆಯಾಗಿ ಸೆಟಲ್ ಆಗಿದ್ದರು. ಇನ್ನು ನಟಿ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ನಿನ್ನೆ ರಾತ್ರಿ ನಡೆದಿರೋ ಘಟನೆ ಅನ್ನೋ ಮಾಹಿತಿ ಇದೆ. ಮದುವೆ ಆದಾಗಿನಿಂದ ಸಿನಿಮಾ ಇಂಡಸ್ಟ್ರಿಯಿಂದ ಅಂತರ ಕಾಯ್ದುಕೊಂಡಿದ್ದರು. ಹೈದರಾಬಾದ್ನಲ್ಲಿ ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಮೃತದೇಹ ತರೋ ಸಾಧ್ಯತೆ ಇದೆ.
ಹಾಸನದ ಸಕಲೇಶಪುರದಲ್ಲಿ ಪದವಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಶೋಭಿತಾ ಕನ್ನಡದ 12ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದರು. ಗಾಳಿಪಟ, ಮಂಗಳಗೌರಿ, ಕೋಗಿಲೆ, ಬ್ರಹ್ಮಗಂಟು, ಕೃಷ್ಣ ರುಕ್ಮಿಣಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು ಮತ್ತು ಮನೆದೇವರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಕನ್ನಡ ಸಿನಿಮಾಲ್ಲಿ ಎರಡೊಂದ್ಲ ಮೂರು ಸಿನಿಮಾದಲ್ಲಿ ಚಂದನ್ ಮತ್ತು ಶ್ವೇತಾ ಪಂಡಿತ್ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದರು. ಇವರಿಗೆ ಟಿವಿ ಅಥವಾ ಸಿನಿಮಾಗಳಲ್ಲಿ ಕನಸು ಇಲ್ಲದಿದ್ದರೂ, ವಿದ್ಯಾರ್ಥಿ ದಿನಗಳಲ್ಲಿ ನೃತ್ಯ ಮಾಡುವ ಮೂಲಕ ತನ್ನ ಆಸಕ್ತಿ ಹೊಂದಿದ್ದರು. ಇವರ ನಿರಂತರ ಶ್ರಮದಿಂದ ಟಿವಿ ನಿರೂಪಕಿಯಾಗಿ ಬಂದರು. ನಂತರ, ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅವಕಾಶ ಪಡೆದರು.
ನಟಿ ಶೋಭಿತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದರು. ಅವರು ಆಗಿಂದಾಗ್ಗೆ ಒಂದೊಂದೇ ಪೋಸ್ಟ್ಗಳನ್ನು ಹಂಚಿಕೊಂಡು ಅಭಿಮಾನಿಗಳ ಸಂಪರ್ಕದಲ್ಲಿದ್ದರು. ಜೊತೆಗೆ, ಕಳೆದ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದ ನಟಿ ಶೋಭಿತಾ ಅವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ‘ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಶುಭಾಶಯಗಳು. ಅತೀ ಶೀಘ್ರದಲ್ಲಿ ‘ಫಸ್ಟ್ ಡೇ, ಫಸ್ಟ್ ಷೋ’ ನಿಮ್ಮ ಮುಂದೆ. ಕನ್ನಡ ಚಿತ್ರರಂಗದಲ್ಲೇ ಹಿಂದೆಂದೂ ನೋಡಿರದ ಮನರಂಜನೆಯ ಕಥಾ ಹಂದರ, ತಾಯಿ ಭುವನೇಶ್ವರಿ ಆಶೀರ್ವದಿಸಿ ಹಾಗು ಕೋಟ್ಯಂತರ ಕನ್ನಡಿಗರು ಹೆಮ್ಮೆಯಿಂದ ಮೆಚ್ಚಿ “ಹೌದೌದು” ಎನ್ನುವ ಚಿತ್ರರಂಗದ ಬಗೆಗಿನ ಒಂದು ಅಪ್ಪಟ ಕನ್ನಡ ಚಿತ್ರ. ಹರಸಿ ಹಂಚಿ ಆಶೀರ್ವದಿಸಿ’ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು.