ಬೆಂಗಳೂರು : ಶ್ರೀ ವಜ್ರಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ತ್ಯಾಗರಾಜನಗರದ ಶ್ರೀ ಅಭಯ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಫೆ. 12 ಶ್ರೀ ಅಭಯ ಲಕ್ಷ್ಮೀನರಸಿಂಹ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ವ್ರತ ಮಹೋತ್ಸವ ಆಚರಿಸಲಾಗುತ್ತಿದೆ.
ಶ್ರೀ ಲಕ್ಷ್ಮೀನರಸಿಂಹ ವ್ರತ ಅತಿ ಅಮೋಘವಾದ, ಅತಿ ಅಪೂರ್ವವಾದ, ಶಾಸ್ತ್ರ ಸಮ್ಮತವಾದ ಅತ್ಯಂತ ವಿಶೇಷವಾದ ವ್ರತವಾಗಿರುತ್ತದೆ. ನೂರಾರು ವರ್ಷಗಳ ನಂತರ ಶ್ರೀ ಲಕ್ಷ್ಮೀನರಸಿಂಹ ವ್ರತವನ್ನು ವಜ್ರಕ್ಷೇತ್ರದಲ್ಲಿ ಪುನರಾರಂಭ ಮಾಡಲಾಗುತ್ತಿದೆ.
ಭಗವಾನ್ ಅಭಯ ಲಕ್ಷ್ಮೀ ನರಸಿಂಹ, ಭಗವಾನ್ ಅಶ್ವಥ ಕುಬೇರ ಲಕ್ಷ್ಮೀ ನರಸಿಂಹ ಮತ್ತು ಕಂಭದ ನರಸಿಂಹನ ವಜ್ರದ ಆಕಾರದ ಸ್ವರೂಪದಿಂದಾಗಿ ಈ ಹೆಸರು ಬಂದಿದ್ದು, ನಗರದಲ್ಲಿ ನರಸಿಂಹ ದೇವಾಲಯ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.
ಇಡೀ ದಿನ ವಿವಿಧ ಪೂಜಾ ಕೈಂಕರ್ಯಗಳು ಮಹಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿ ಅರುಣ್ ಚಿಂತೋಪಂತ್ ಡಿ. ರಮಾಬಾಯಿ, ಡಾ.ಎಸ್.ಆರ್. ವಾದಿರಾಜಾಚಾರ್, ಅರ್ಚಕರಾದ ನರಹರಿ ಆಚಾರ್ ತಿಳಿಸಿದ್ದಾರೆ. ಸಮೃದ್ಧಿ, ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ, ಸಂಪತ್ತು, ಸಕಾರಾತ್ಮಕ ಶಕ್ತಿ ಮತ್ತು ಔದ್ಯೋಗಿಕ ಸಮಸ್ಯೆಗಳನ್ನು ನಿವಾರಿಸಲು ಶ್ರೀ ಲಕ್ಷ್ಮೀ ನರಸಿಂಹ ವ್ರತ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.