ಅಯೋಧ್ಯೆ: ನಾಳೆ ದೇಶಾದ್ಯಂತ ರಾಮ ನವಮಿ ಸಂಭ್ರಮ ಕಂಡುಬರಲಿದೆ. ಈ ನಡುವೆ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಇದು ಮೊದಲ ರಾಮ ನವಮಿ ಆಗಿರುವುದರಿಂದ ಅಲ್ಲಿಗೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ. ಲಕ್ಷಾಂತರ ಜನರು ಅಯೋಧ್ಯೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಜನದಟ್ಟಣೆಯಾಗುವ ಸಾಧ್ಯತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆಗೆ ಬರದಂತೆ ಮನವಿ ಮಾಡಲಾಗಿದೆ. ರಾಮಜನ್ಮಭೂಮಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಸಂಬಂಧ ಮನವಿ ಮಾಡಿದ್ದಾರೆ. ತಮ್ಮ ತಮ್ಮ ನಗರಗಳಲ್ಲಿ ರಾಮ ನವಮಿ ಆಚರಿಸಿಕೊಳ್ಳುವಂತೆ ಅವರು ವಿನಂತಿಸಿದ್ದಾರೆ. ವಿಐಪಿಗಳು, ವಿವಿಐಪಿಗಳಿಗೆ ವಿಶೇಷ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವಿಶೇಷದ್ವಾರದ ಮೂಲಕ ಎಲ್ಲರಿಗೂ ದರ್ಶನ ಸಿಗುತ್ತದೆ ಎಂದು ಟ್ರಸ್ಟ್ ತಿಳಿಸಿದೆ. ಮೂರು ದಿನಗಳವರೆಗೆ ವಿಶೇಷ ಪ್ರವೇಶವಿಲ್ಲ, ಸಾಮಾನ್ಯ ಪ್ರವೇಶ ದ್ವಾರದಿಂದ ಯಾರು ಬೇಕಾದರೂ ಭೇಟಿ ನೀಡಬಹುದು ಎಂದು ಟ್ರಸ್ಟ್ ಹೇಳಿದೆ.