ಕಾಪು : ಮಾರಿಯಮ್ಮನ ಕ್ಷೇತ್ರದಲ್ಲಿ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿಯಾಗಿದ್ದು ಆ ಪ್ರಯುಕ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಏಪ್ರಿಲ್ 9ಕ್ಕೆ ಸಾನಿಧ್ಯ, ವೃದ್ಧಿಗಾಗಿ ಭೂಕರ್ಷನ ಖನನ, ಹರಣ, ದಾಹ, ಪೂರಣ ಮತ್ತು ನವಧಾನ್ಯಗಳಿಂದ ಬೀಜ ವಪನ ಮಾಡಲಾಗಿತ್ತು, ಈಗಾಗಲೇ ನವಧಾನ್ಯ ಬೀಜಗಳು ಮೊಳಕೆಯೊಡೆದಿವೆ.
ಏಪ್ರಿಲ್ 30 ರಂದು ಬೆಳಿಗ್ಗೆ 10 ಗಂಟೆಗೆ ಗರ್ಭಗುಡಿಯಲ್ಲಿ ಮೊಳಕೆಯೊಡೆದ ನವಧಾನ್ಯಗಳನ್ನು ಗೋವುಗಳು ಮೇಯುವ ಕಾರ್ಯಕ್ರಮ ನಡೆಯಲಿದೆ.
ಶ್ರೀಕೃಷ್ಣನ ಕೊಳಲಿನ ವಾದನದೊಂದಿಗೆ ಗೋವುಗಳನ್ನು ಗರ್ಭಗುಡಿಯವರೆಗೆ ಕರೆದುಕೊಂಡು ಹೋಗಿ ಪೂಜಿಸಲಾಗುವುದು ಹಾಗೂ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳಿಂದ ವಿಶೇಷ ಭಜನೆ ಮತ್ತು ಅನೇಕ ಕಾರ್ಯಕ್ರಮಗಳು ನಡೆಯಲಿವೆ.
9 ಗೋವುಗಳು ಸಾನಿಧ್ಯದಲ್ಲಿ ವಾಸ್ತವ್ಯವಿದ್ದು, ಅವುಗಳಿಗೆ ಮೇವನ್ನು ನೀಡಿ ಗೋಪೂಜೆ ನೇರವೆರಿಸುವ ಕಾರ್ಯಕ್ರಮವೇ ಗೋನಿವಾಸ.
ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಮಾರಿಯಮ್ಮನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.