ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ಬಳಿ ಅನಧಿಕೃತವಾಗಿ ನಿರ್ಮಿಸಿರುವ ಗೂಡಂಗಡಿಗಳ ತೆರವಿಗೆ ಟೋಲ್ ಗೇಟ್ ಮುಂದಾಗಿದೆ. ಆ ಪ್ರಯುಕ್ತ ಮೊದಲ ಹಂತದಲ್ಲಿ ವ್ಯಾಪಾರ ನಡೆಸದೆ ಇರುವ ಚಪ್ಪರಗಳನ್ನು ತೆರವುಗೊಳಿಸಲಾಗಿದೆ.
ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಚಪ್ಪರ ನಿರ್ಮಿಸಿ ಹೆಚ್ಚಿನ ಮೊತ್ತ ಪಡೆದು ಬೇರೆಯವರಿಗೆ ನೀಡಿ ಬಾಡಿಗೆ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ವ್ಯಾಪಾರ ನಡೆಸದೆ ಇರುವ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ವ್ಯಾಪಾರ ವಹಿವಾಟು ನಡೆಸದ 8 ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಮುಂದಿನ ಹಂತದ ಕಾರ್ಯಾಚರಣೆಯಲ್ಲಿ ಸುರತ್ಕಲ್ ನಿಂದ ಕುಂದಾಪುರವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಅನಧಿಕೃತ ಗೂಡಂಗಡಿಗಳ ತೆರವುಗೊಳಿಸಲು ಪ್ರಕಟಣೆ ನೀಡಲಾಗುವುದು ಎಂದು ಹೆಜಮಾಡಿ ಕೆಕೆಆರ್ ಟೋಲ್ ಗೇಟ್ ಪ್ರಬಂಧಕ ತಿಮ್ಮಯ್ಯ ತಿಳಿಸಿದರು.
ಟೋಲ್ ಗೇಟ್ ಬಳಿಯ ಅನಧಿಕೃತ ಗೂಡಂಗಡಿ ತೆರವುಗೊಳಿಸುವ ಹಿನ್ನೆಲೆಯಲ್ಲಿ ಬೆಳಗ್ಗೆ ಪೊಲೀಸ್ ಬಂದೋಬಸ್ತ್ ನಡೆಸಲಾಗಿತ್ತು. ವ್ಯಾಪಾರ ನಡೆಸುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸದಂತೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದರು. ಆ ಬಳಿಕ ವ್ಯಾಪಾರ ನಡೆಸದೆ ಇರುವ ಗೂಡಂಗಡಿಗಳನ್ನು ಮಾತ್ರ ತೆರವುಗೊಳಿಸಲಾಯಿತು.