ನೆಲಮಂಗಲ: ಕಾರಿನ ಮೇಲೆ ಕಂಟೇನರ್ ಬಿದ್ದ ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿರುವ ಘಟನೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿ.ಬೇಗೂರು ಬಳಿ ಘಟನೆ ನಡೆದಿದೆ.
ಅಪಘಾತದ ವೇಳೆ ಕಂಟೇನರ್ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಎರಡು ಹೆಣ್ಣು ಮಕ್ಕಳು ಒಬ್ಬ ಯುವಕ, ಮತ್ತೊರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಹೆವಿ ಲೋಡ್ ಇರುವ ಕಂಟೇನರ್ ಮೇಲೆತ್ತಲು ಲಾರಿ ಬೆಲ್ಟ್, ಚೈನ್ಗಳನ್ನ ತರಿಸಿ, ಹರಸಾಹಸ ಪಟ್ಟು ಮೂರು ಕ್ರೇನ್ಗಳ ಸಹಾಯದಿಂದ ಕಂಟೇನರ್ ಮೇಲೆತ್ತಿ ಕಾರನ್ನು ಹೊರತೆಗೆಯಲಾಯಿತು. ಈ ವೇಳೆ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಸದ್ಯ ನೆಲಮಂಗಲ ಪೊಲೀಸರು ಹಾಗೂ ಎಸ್ಪಿ ಸಿ.ಕೆ ಬಾಬಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವೀಕೆಂಡ್ ಪ್ರವಾಸಕ್ಕೆ ಹೊರಟಿದ್ದ ಕುಟುಂಬ 6 ತಿಂಗಳ ಹಿಂದೆಯಷ್ಟೇ ಕಾರು ಖರೀದಿಸಿತ್ತು ಎಂದು ತಿಳಿದುಬಂದಿದೆ.