ಮುಂಬೈ: ಮಹಾರಾಷ್ಟ್ರ ಕೇಡರ್ನ 2023ರ ತಂಡದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಎಂಬವರು ತಮ್ಮ ಖಾಸಗಿ ಆಡಿ ಕಾರಿಗೆ ಸೈರನ್ ಹಾಕಿಸಿದ್ದಲ್ಲದೆ, ಸರ್ಕಾರಿ ನಾಮಫಲಕ ಅಳವಡಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಖೇಡ್ಕರ್ ನಕಲಿ ಜಾತಿ ಪ್ರಮಾಣಪತ್ರ ಹಾಗೂ ನಕಲಿ ದಾಖಲೆಗಳ ಮೂಲಕ ಉದ್ಯೋಗ ನೇಮಕಾತಿ ಪಡೆದಿದ್ದಾರೆ ಎಂಬ ಚರ್ಚೆಯೂ ಆರಂಭವಾಗಿದೆ.
ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯ ಸಂದರ್ಭದಲ್ಲಿ ಒಬಿಸಿ ಪ್ರಮಾಣ ಪತ್ರ ಸಲ್ಲಿಸಿರುವುದು ನಕಲಿ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಪೂಜಾ ಖೇಡ್ಕರ್ ದೃಷ್ಟಿ ದೋಷ, ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದರು. ಅವೆಲ್ಲಾ ನಕಲಿ ಎಂದು ಆಪಾದಿಸಲಾಗಿದೆ.
ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಸರ್ಕಾರಿ ಅಧಿಕಾರಿಯಾಗಿದ್ದರು. ಬಳಿಕ ಅವರು ರಾಜೀನಾಮೆ ಸಲ್ಲಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ನಾಮಪತ್ರದಲ್ಲಿ ಸಲ್ಲಿಸಿದ್ದ ಇವರ ಒಟ್ಟು ಆಸ್ತಿ 40 ಕೋಟಿ ರೂ. ಎಂದು ನಮೂದಿಸಲಾಗಿದೆ. ಒಬಿಸಿ ಕೆನೆಪದರ ಮಿತಿ 8 ಲಕ್ಷ ರೂ. ಆದಾಯ ಮೀರುವಂತಿಲ್ಲ. ಹೀಗಿರುವಾಗ ಪೂಜಾ ಆರಂಭದಿಂದಲೂ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪ್ರೊಬೆಷನರಿ ಅಧಿಕಾರಿಯಾಗಿ ಪುಣೆಯಲ್ಲಿ ವರದಿ ಮಾಡಿಕೊಂಡ ಪೂಜಾ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ತಮ್ಮ ಸ್ವಂತ ಐಶಾರಾಮಿ ಆಡಿ ಕಾರಿಗೆ ಬೀಕನ್ ಅಳವಡಿಸಿದ್ದಲ್ಲದೆ, ವಿಐಪಿ ನಂಬರ್ ಪ್ಲೇಟ್ ಅಳವಡಿಕೆ ಹಾಗೂ ಸರ್ಕಾರಿ ವಾಹನ ಎಂದು ನಮೂದಿಸಿರುವುದು ದೊಡ್ಡ ಸುದ್ದಿಯಾಗಿದೆ.
ಐಎಎಸ್ ಅಧಿಕಾರಿಯಾಗಿ ನೇಮಕಗೊಂಡ ಮೊದಲ 2 ವರ್ಷ ಪ್ರೊಬೆಷನರಿ ಅವಧಿಯಾಗಿದ್ದು, ಈ ವೇಳೆ ಹೆಚ್ಚುವರಿ ಯಾವುದೇ ಸವಲತ್ತುಗಳಿರುವುದಿಲ್ಲ. ಹೀಗಿರುವಾಗ ಇವರ ಬೇಸತ್ತಿದ್ದ ಅಧಿಕಾರಿಗಳು ಜಿಲ್ಲಾಧಿಕಾರಿ ಡಾ. ಸುಹಾಸ್ ದಿವಾಸೆ ಮತ್ತು ರಾಜ್ಯ ಮುಖ್ಯ ಆಯುಕ್ತ ಸುಜಾತಾ ಸೌನಿಕ್ಗೆ ದೂರು ಸಲ್ಲಿಸಿದ್ದಾರೆ.