ದಾವಣಗೆರೆ: ಸಾಹಿತ್ಯ ಕೇವಲ ಪ್ರಚಾರಕ್ಕೆ ಸೀಮಿತವಾಗದೇ ಮನದಾಳದಿಂದ ಹೃದಯ ಭಾಗದಿಂದ ಸಾಹಿತ್ಯದೊಂದಿಗೆ ಕವನ ರಚಿಸಿರೆ ಕವನಕ್ಕೆ ಭವ್ಯ ದಿವ್ಯ ಬೆಲೆ ಬರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ನಾನಾ ಯುವ ಸಾಹಿತಿಗಳ ಹಳೆಗನ್ನಡ ಸಾಹಿತ್ಯದ ಅಭಿರುಚಿ ಕಾಳಜಿ ಇಲ್ಲದಿರುವುದು ವಿಷಾದನೀಯ. ಪಂಪ, ರನ್ನ, ಜನ್ನ, ಕುಮಾರವ್ಯಾಸ ಹೀಗೆ ಹತ್ತ ಹಲವು ಕವಿ, ಸಾಹಿತಿ, ದಿಗ್ಗಜರ ಪರಿಚಯ, ನೆನಪು, ಹಿರಿಯರ-ಕಿರಿಯರಿಗೆ ಮನದಟ್ಟು ಮಾಡುವ ಅಗತ್ಯವಿದೆ ಎಂದು ರಾಯಚೂರಿನ ಯುವ ಸಾಹಿತಿ ನಾನಾಗೌಡ ಮಾಲಿ ಪಾಟೀಲ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ನಿನ್ನೆ ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ರೋಟರಿ ಬಾಲಭವನದಲ್ಲಿ “ಕಾವ್ಯ ಕುಂಚ” ಕವನ ಸಂಕಲನ ಮತ್ತು “ಕುಂಚ ಕೈಪಿಡಿ” ಲೇಖನಗಳ ಸಂಗ್ರಹದ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮುಡುಬಿದಿರೆಯ ಹಿರಿಯ ಸಾಹಿತಿ, ಕವಿ ಡಾ. ರಾಮಕೃಷ್ಣ ಶಿರೂರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕನ್ನಡ ಸಂಸ್ಕೃತಿ ಇಲಾಖೆ, ಶಿಕ್ಷಣ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮಾಡದೇ ಇರುವ ಹೊಸ, ಹೊಸ ಪರಿಕಲ್ಪನೆಯೊಂದರ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣಗಳ ನಿರಂತರ ಕಠಿಣ ಪರಿಶ್ರಮದಿಂದ ಸ್ವತಂತ್ರವಾಗಿ ವೈಭವಪೂರ್ಣವಾಗಿ ಕಳೆದ ಮೂರುವರೆ ದಶಕಗಳಿಂದ ನಡೆಸುತ್ತಿರುವ ಕರ್ನಾಟಕದ ಏಕೈಕ ಸಂಸ್ಥೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಇದರ ರೂವಾರಿ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ಶೆಣೈಯವರು. ಪ್ರಾಥಮಿಕ ಶಿಕ್ಷಣಕ್ಕೆ ಸೀಮಿತವಾದರೂ ಕಲೆ, ಸಾಹಿತ್ಯ, ಯಕ್ಷಗಾನ, ಶಿಕ್ಷಣದ ಪರಿಜ್ಞಾನದೊಂದಿಗೆ ಬೆಣ್ಣಿನಗರಿ ದಾವಣಗೆರೆಯಲ್ಲಿ ವೈಭವೀಕರಿಸುವುದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ “ಕಾವ್ಯ ಕುಂಚ” ಕವನ ಸಂಕಲನದ ಪ್ರಧಾನ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಮಾತನಾಡಿ, ಸಂಘಟನೆಗಳು ನಿರಂತರ ಮುಂದುವರಿಯಬೇಕಾದರೆ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ, ಬದ್ಧತೆಗಳು ಅಗತ್ಯವಿದೆ. ಸಂಘ-ಸಂಸ್ಥೆಗಳು ಕೇವಲ ಆರಂಭಶೂರತ್ವಕ್ಕೆ ಸೀಮಿತವಾಗದೇ ಸಂಘಟಕರು ಸಾಮಾಜಿಕ ಕಾಳಜಿಯೊಂದಿಗೆ ಸಂಕುಚಿತ ಭಾವನೆಬಿಟ್ಟು ವಿಶಾಲವಾದ ಸೇವಾ ಮನೋಭಾವನೆಯೊಂದಿಗೆ ತೊಡಗಿಸಿಕೊಂಡಾಗ ಸಂಘಟನೆಗಳು ಸಬಲತೆಯಾಗುತ್ತದೆ ಎಂದರು.
ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ಶೆಣೈ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವಿವಿಧ ಬಡಾವಣೆಗಳ ಶಾಖೆಗಳ ಅಧ್ಯಕ್ಷರುಗಳಾದ ಪ್ರಭಾ ರವೀಂದ್ರ, ವಿ.ಕೃಷ್ಣಮೂರ್ತಿ, ರಾಜಶೇಖರ ಬೆನ್ನೂರು, ಲಲತಾ ಕಲ್ಲೇಶ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು.
ಚಂದ್ರಶೇಖರ ಅಡಿಗರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ ವಿವಿಧ ಜಿಲ್ಲೆಗಳ ಕವಿ, ಕವಯತ್ರಿಯರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿಯ ಸ್ಮರಣಿಕೆ ಹಾಗೂ ಕಾವ್ಯ ಕುಂಚ ಕವನ ಸಂಕಲನ ವಿತರಿಸಲಾಯಿತು. ಶೈಲಾ ವಿನೋದ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಲಲಿತಾ ಕಲ್ಲೇಶ್ ವಂದಿಸಿದರು.
