ಯಕ್ಷ ಶಿಷ್ಯ ಟ್ರಸ್ಟ್ ( ರಿ.) ಉಡುಪಿ ಆಯೋಜಿಸುತ್ತಿರುವ ಕಿಶೋರ್ ಯಕ್ಷಗಾನ ಸಂಭ್ರಮ 2024ರ ಕುಂದಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆಯುವ 22 ಪ್ರೌಢಶಾಲೆಗಳ ಪ್ರದರ್ಶನಗಳ ಉದ್ಘಾಟನೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ 15-12- 2024 ರಂದು ಜರಗಿತು. ಈ ಭಾಗದ ಪ್ರತಿಯೊಬ್ಬರ ಮಾತಿನಲ್ಲಿ, ಬರವಣಿಗೆಯಲ್ಲಿ ಯಕ್ಷಗಾನದ ದಟ್ಟ ಪ್ರಭಾವ ಗೋಚರವಾಗುತ್ತದೆ. ಇಂತಹ ನಮ್ಮ ಮಣ್ಣಿನ ಅಪೂರ್ವ ಕಲೆಯನ್ನು ಮಕ್ಕಳಿಗೆ ಪರಿಚಯಿಸುವ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗಲೆಂದು ಜ್ಯೋತಿ ಬೆಳಗಿ ಉದ್ಘಾಟಿಸಿದ,ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತರು ನುಡಿದರು. ಕುಂದಾಪುರ ಶಾಸಕರಾದ ಕಿರಣ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಆನಂದ ಸಿ.ಕುಂದರ್, ರಾಜಶೇಖರ್ ಹೆಬ್ಬಾರ್,ವಾಸುದೇವ ಕಾರಂತ, ಜಗದೀಶ ನಾವುಡ, ಶ್ರೀನಿವಾಸ ಉಪಾಧ್ಯಾಯ ಅಭ್ಯಾತರಾಗಿ ಪಾಲ್ಗೊಂಡು ಶುಭ ಕೋರಿದರು. ಯಕ್ಷಗಾನ ಕಲಾರಂಗದ ಎಸ್.ವಿ.ಭಟ್, ಎಚ್.ಎನ್. ಶೃಂಗೇಶ್ವರ,ಗಣೇಶ್ ಬ್ರಹ್ಮಾವರ್, ಗಣಪತಿ ಭಟ್,ನಾಗರಾಜ ಹೆಗಡೆ ಭಾಗವಿಸಿದ ಸಮಾರಂಭದಲ್ಲಿ ನಾರಾಯಣ ಎಂ.ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಡಾ.ರಾಜೇಶ್ ನಾವುಡ ಧನ್ಯವಾದ ಸಲ್ಲಿಸಿದರು. ಸಭೆಯ ಪೂರ್ವದಲ್ಲಿ ಚೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರತೀಶ್ ಕುಮಾರ್ ನಿರ್ದೇಶನದಲ್ಲಿ ವನವಿಲಾಸ, ಸಭಾ ಕಾರ್ಯಕ್ರಮದ ಬಳಿಕ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ನರಸಿಂಹ ತುಂಗರ ನಿರ್ದೇಶನದಲ್ಲಿ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಂಡಿತು.