ದಾವಣಗೆರೆ : ಕರ್ನಾಟಕ ಸುಗಮ ಸಂಗೀತ ಪರಿಷತ್, ಅನುಶ್ರೀ ಸಂಗೀತಶಾಲೆ ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ15/06/2024ನೇ ಶನಿವಾರ ಸಂಜೆ 5 ಗಂಟೆಗೆ ದಾವಣಗೆರೆಯ ಜಿಲ್ಲಾ ಕ್ರಿಡಾಂಗಣದ ಎದುರು, ಎ.ವಿ.ಕೆ. ಕಾಲೇಜು ರಸ್ತೆಯಲ್ಲಿರುವ ವಿನ್ನರ್ಸ್ ಅಕಾಡೆಮಿ ಸಭಾಂಗಣದಲ್ಲಿ ಸ್ಥಳೀಯ ಕವಿಗಳ ಪದ್ಯಗಾಯನ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದುಷಿ ಶ್ರೀಮತಿ ಸಂಗೀತಾ ರಾಘವೇಂದ್ರ ತಿಳಿಸಿದ್ದಾರೆ.
ಸಮಾರಂಭದ ಉದ್ಘಾಟನೆಯನ್ನು ನಾಡಿನ ಖ್ಯಾತ ಹಿರಿಯ ಕವಿ, ಸಾಹಿತಿ ಬೆಂಗಳೂರಿನ ಬಿ.ಆರ್.ಲಕ್ಷ್ಮಣ್ ರಾವ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪರಿಷತ್ತಿನ ಜಿಲ್ಲಾಧ್ಯಕ್ಷರೂ, ಹವ್ಯಾಸಿ ಗಾಯಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಹಿರಿಯ ಚುಟುಕು ಕವಿ ಬೆಂಗಳೂರಿನ ಹೆಚ್.ಡುಂಡಿರಾಜ್ ಆಗಮಿಸಲಿದ್ದಾರೆ.
ದಾವಣಗೆರೆಯ ಅನುಶ್ರೀ ಸಂಗೀತಶಾಲೆಯ ಸಂಸ್ಥಾಪಕರಾದ ವಿದುಷಿ ವೀಣಾ ಸದಾನಂದ ಹೆಗಡೆಯವರು “ಸ್ವರಾಭರಣ” ಪ್ರಸ್ತುತಿ ನಡೆಸಿಕೊಡಲಿದ್ದಾರೆ. ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ವಿನ್ನರ್ಸ್ ಅಕಾಡೆಮಿಯ ಅಧ್ಯಕ್ಷರಾದ ಶಿವರಾಜ್ ಕಬ್ಬೂರು, ಕನ್ನಡ ಪ್ರೇಮಿ, ದಾವಣಗೆರೆಯ ಔಷಧೋದ್ಯಮಿ ಪೋಟಪ್ಲಾಲ್ಜೈನ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ಗೌರವ ಉಪಸ್ಥಿತರಿರುತ್ತಾರೆ.
ಈ “ಸ್ವರಾಭರಣ” ಸ್ವರ ಸಂಯೋಜಿಸಲಾದ ಪದ್ಯ ರಚಿಸಿದ ದಾವಣಗೆರೆಯ ಕವಿ, ಕವಯತ್ರಿಯರಾದ ಮಲ್ಲಿಕಾರ್ಜುನ ಕಲಮರಹಳ್ಳಿ, ಬಿ.ಎನ್.ಮಲ್ಲೇಶ್, ಆನಂದ ಋಗ್ವೇದಿ, ನಾಗರತ್ನ ಮಲ್ಲಿಕಾರ್ಜುನ, ಸತ್ಯಭಾಮ ಮಂಜುನಾಥ್, ಸಂತೇಬೆನ್ನೂರು ಪ್ರೈಜ್ ನಟರಾಜ್ , ಸಾಲಿಗ್ರಾಮ ಗಣೇಶ್ ಶೆಣೈ ಮುಂತಾದವರು ಉಪಸ್ಥಿತರಿರುತ್ತಾರೆ.
ಸಾಹಿತ್ಯ, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಮಹತ್ವಪೂರ್ಣ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.