ಮಂಗಳೂರು : ವೈದ್ಯಕೀಯ ಶಾಸ್ತ್ರ ತಜ್ಞರ ಸಂಘದ ಮಂಗಳೂರು ಶಾಖೆಯ ಆಶ್ರಯದಲ್ಲಿ ಸಂಸ್ಥೆಯ ಸದಸ್ಯರ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅನ್ವಯವಾಗುವ ನೂತನ “ಭಾರತೀಯ ನ್ಯಾಯ ಸಂಹಿತೆ” ಕುರಿತು ವೈದ್ಯಕೀಯ ಕಾನೂನಿನ ಕಾರ್ಯಾಗಾರವನ್ನು ತಾ:೨೨.೦೮.೨೦೨೪ ರಂದು ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷೆ ಡಾ. ವತ್ಸಲಾ ಕಾಮತ್ ಅಧ್ಯಕ್ಷತೆಯಲ್ಲಿ ಜರಗಿತು.
ನಿವೃತ್ತ ಸಹಾಯಕ ಪೋಲೀಸ್ ಆಯುಕ್ತರಾದ ಶ್ರೀ ಅಶೋಕನ್ ಕೆ.ಸಿ. ಈ ಕಾರ್ಯಾಗಾರವನ್ನು ಉದ್ಘಾಟಿಸಿ ಸರ್ಕಾರವು ಶೀಘ್ರದಲ್ಲಿ ವೈದ್ಯಕೀಯ ವೃತ್ತಿ ಮತ್ತು ಸೇವೆ ಸಲ್ಲಿಸುವ ಚಿಕಿತ್ಸಾಲಯದಲ್ಲಿ ಸೂಕ್ತ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುವ ನೂತನ ಕಾನೂನು ಮತ್ತು ಕಾಯ್ದೆಯನ್ನು ಜಾರಿಗೆ ತರಲಿದೆ ಎಂದು ಮಾಹಿತಿ ನೀಡಿ, ಡಾ. ಅರುಣ ಯಡಿಯಾಲ್ ಸಂಪಾದಕ್ವದ ಸಂಸ್ಥೆಯ ಪ್ರಥಮ ಗೃಹ ವಾರ್ತಾ ಪತ್ರಿಕೆ “ಎಮಿಕಸ್” ಮತ್ತು ಡಾ. ರಘುವೀರ್ ಸಂಪಾದಕ್ವದ ಸಂಸ್ಥೆಯ ಸದಸ್ಯರ ನೂತನ ಕೈಪಿಡಿಯನ್ನು ಅನಾವರಣಗೊಳಿಸಿ ಕಾರ್ಯಾಗಾರಕ್ಕೆ ಶುಭ ಹಾರೈಸಿದರು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿಗಳಾದ ಕೆ. ಪೃಥ್ವಿರಾಜ್ ರೈ ಮತ್ತು ವಿವೇಕಾನಂದ ಪಣಿಯಾಲ ರವರು ಭಾಗವಹಿಸಿ ತಮ್ಮ ಅತಿಥಿ ಉಪನ್ಯಾಸದಲ್ಲಿ ಭಾರತೀಯ ನ್ಯಾಯ ಸಂಹಿತೆಯಲ್ಲಿ ವೈದ್ಯಕೀಯ ವೃತ್ತಿ ಸೇವೆ ಸಲ್ಲಿಸುವವರಿಗೆ ಅನ್ವಯವಾಗುವ ರಕ್ಷಣೆ, ಭದ್ರತೆ ಮತ್ತು ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳ ಮೇಲೆ ಆಗುವ ಅಪರಾಧ, ಅನಾಹುತ, ನಿಬಂಧನೆ ಹಾಗೂ ಶಿಕ್ಷಾರ್ಹತೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಸದಸ್ಯರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಂಸ್ಥೆಯ ಅಧ್ಯಕ್ಷೆ ಡಾ. ವತ್ಸಲಾ ಕಾಮತ್ ಸ್ವಾಗತಿಸಿ ಈ ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವದ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಪೋಲೀಸ್ ಉಪನಿರೀಕ್ಷಕರಾದ ವಿನಾಯಕ್ ತೋರಗಲ್, ಭಾರತೀಯ ವೈದ್ಯಕೀಯ ಸಂಘದ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ದಿವಾಕರ ರಾವ್, ಡಾ. ಸತೀಶ್ ಭಟ್, ಡಾ. ಪ್ರಕಾಶ್ ಹರಿಶ್ಚಂದ್ರ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ. ಜಯಪ್ರಕಾಶ್ ಕೆ.ಪಿ. ಸಂಸ್ಥೆಯ ವರದಿ ಮಂಡಿಸಿ ಬಳಿಕ ವಂದಿಸಿದರು. ಡಾ. ಚೈತ್ರ, ಡಾ. ಅನಿತ ಕಾರ್ಯಕ್ರಮ ನಿರೂಪಿಸಿದರು.