ದಾವಣಗೆರೆ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಬ್ಯಾಕೂಡ ಗ್ರಾಮದ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕರ ಸಂಘದಿಂದ ನಿನ್ನೆ ತಾನೆ ಧಾರವಾಡ ರಂಗಾಯಣ ಸಭಾಂಗಣದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ತೃತೀಯ ಬಯಲಾಟ ಉತ್ಸವದ ಸಮಾರಂಭದಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕಲಾಕುಂಚ, ಯಕ್ಷರಂಗ ಸಂಸ್ಥೆ, ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಸಿನಿಮಾಸಿರಿ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ಅವರ ನಿರಂತರ ನಾಲ್ಕು ದಶಕಗಳಿಂದ ಸಾಧನೆಗಳನ್ನು ಗುರುತಿಸಿ “ಕನ್ನಡ ರತ್ನ” ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ಸಂಸ್ಥೆಯ ಅಧ್ಯಕ್ಷರಾದ ಸಿದ್ರಾಮ ಎಂ.ನಿಲಜಗಿ ತಿಳಿಸಿದ್ದಾರೆ.
ರಾಯಭಾಗದ ದಿಗ್ಗೇವಾಡಿಯ ಶ್ರೀ ದುರ್ಗಾಪರಮೇಶ್ವರಿ ಮತ್ತು ಕಾಳಿಕಾದೇವಿ ಆರಾಧಕರಾದ ಶ್ರೀ ಶ್ರೀ ವೇ. ಡಾ. ಶಿವಮೂರ್ತಿ ಹಿರೇಮಠ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯ ಜನಪದ ಕಲಾವಿದರು, ವಿದ್ವಾಂಸರಾದ ಡಾ. ಸಿ. ಕೆ. ನಾವಲಗಿ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶ್ರೀ ಲಕ್ಕಮ್ಮದೇವಿ ಕಲಾ ಪೋಷಕರ ಸಂಘದ ಗೌರವಾಧ್ಯಕ್ಷರಾದ ಡಾ. ಸಿದ್ದಣ್ಣ ಬಾಡಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಧಾರವಾಡದ ಉಚ್ಚ ನ್ಯಾಯಾಲಯದ ಎಸ್.ಹೆಚ್.ಮಿಟ್ಟಿಲಕೋಡ, ರಂಗಾಯಣದ ನಿರ್ದೇಶಕರಾದ ಡಾ. ರಾಜು ತಾಳಿಕೋಟೆ, ಧಾರವಾಡದ ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷರಾದ ಶಂಕರ ಕುಂಬಿ, ಹುಬ್ಬಳ್ಳಿಯ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಸಂಪಾದಕರಾದ ಡಾ. ಎಸ್.ಎಸ್. ಪಾಟೀಲ, ರಾಯಚೂರಿನ ಸಂಜೆವಾಹಿನಿ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಅಣ್ಣಪ್ಪ ಮೇಟಿಗೌಡ, ಬಾದಾಮಿಯ ನಾನಾ ವಿಜ್ಞಾನ ಸಮಿತಿಯ ತಾಲೂಕು ಅಧ್ಯಕ್ಷರಾದ ಜೆ.ಕೆ. ಹುಸೇನಬಾಯಿ ಮುಂತಾದ ಗಣ್ಯ ಮಾನ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕಲಾಕುಂಚ, ಯಕ್ಷರಂಗ ಸಂಸ್ಥೆ, ಕರಾವಳಿ ಮಿತ್ರಮಂಡಳಿ, ಬಿಚ್ಕತ್ತಿ ಕುಟುಂಬ, ಕಾವೇರಿ ಸಾಂಸ್ಕೃತಿಕ ವೇದಿಕೆ, ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಸಿನಿಮಾಸಿರಿ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಶ್ರೀ ಗಾಯಿತ್ರಿ ಪರಿವಾರ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಗಮ ಸಂಗೀತ ಪರಿಷತ್, ಗೌಡಸಾರಸ್ವತ ಸಮಾಜ, ಜಿಲ್ಲೆ ಸಮಾಚಾರ ಪತ್ರಿಕಾ ಬಳಗ, ಸಮಾನ ಮನಸ್ಕರ ವೇದಿಕೆ, ಕಲಾಕುಂಚ ಮಹಿಳಾ ವಿಭಾಗ, ಕಾವ್ಯಕುಂಚ, ಗಾನ ಕುಂಚ, ಕುಂಚ ಕೈಪಿಡಿ ಮುಂತಾದ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.