ಕರ್ನಾಟಕ ಬ್ಯಾಂಕ್ ಸೂರ್ಯನಂತೆ ಪ್ರಕಾಶಿಸುತ್ತಿದೆ : ಕುಮಾರಗುರು ತಂತ್ರಿ.
ಕಡ್ತಲ : ನಮ್ಮ ಬದುಕಿನ ಜೊತೆಗೆ ಇತರರು ಬದುಕುವಂತೆ ಮಾಡಿ ನಾವು ಬದುಕಿದಾಗ ನಮ್ಮ ಹೆಸರು ಶಾಶ್ವತವಾಗುತ್ತದೆ. ಅಂತಹ ಮಹತ್ವದ ಕೆಲಸವನ್ನು ಕರ್ನಾಟಕ ಬ್ಯಾಂಕ್ ಮಾಡುತ್ತ ಬಂದಿರುವುದು ಶ್ಲಾಘನೀಯ. ನಾಳಿನ ಭವಿಷ್ಯಕ್ಕಾಗಿ ಠೇವಣಿ ಇಡಬೇಕು, ಆ ಮೂಲಕ ಮುಂದಿನ ದಿನಮಾನಕ್ಕೆ ಸಹಾಯವಾಗುತ್ತದೆ. ಕರ್ನಾಟಕ ಬ್ಯಾಂಕ್ ಸೂರ್ಯನಂತೆ ಪ್ರಕಾಶಿಸುತ್ತಿದೆ. ರಾಜ್ಯದ ಹೆಸರನ್ನೇ ಬ್ಯಾಂಕಿಗೆ ಇಟ್ಟು ದೇಶದಾದ್ಯಂತ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿದ ಹೆಚ್ಚುಗಾರಿಕೆ ಕರ್ನಾಟಕ ಬ್ಯಾಂಕಿಗೆ ಸಲ್ಲುತ್ತದೆ ಎಂದು ಕಾಪು ಕ್ಷೇತ್ರದ ಆಸ್ಥಾನ ರಾಜ ಪುರೋಹಿತರಾದ ಜ್ಯೋತಿರ್ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಹೇಳಿದರು.
ಅವರು ಗುರುವಾರ ಕಡ್ತಲದ ಕುಂಜೆಕ್ಯಾರ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಕರ್ನಾಟಕ ಬ್ಯಾಂಕ್ 956ನೇ ಶಾಖೆ ವಿತ್ತೀಯ ಸೇರ್ಪಡೆ – ಮಿನಿ ಇ ಲಾಬಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ವಾದಿರಾಜ ಕೆ ಅಂದು ವಕೀಲರು, ಕೃಷಿಕರು, ಜನಸಾಮಾನ್ಯರು ಸೇರಿ ಕಟ್ಟಿ ಬೆಳೆಸಿದ ಮುನ್ನಡೆಸಿದ ಕರ್ನಾಟಕ ಬ್ಯಾಂಕ್ ಶತಮಾನೋತ್ತರ ಸಂಭ್ರಮದಲ್ಲಿ. ದೇಶದಲ್ಲೆ ಎತ್ತರಕ್ಕೆ ಬೆಳೆದಿದೆ. ಬ್ಯಾಂಕಿನ ಸಾಧನೆಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಈಗ ಬ್ಯಾಂಕ್ 1.77 ಸಾವಿರ ಕೋಟಿ ವ್ಯವಹಾರವನ್ನು ನಡೆಸುತ್ತಿದೆ. ಕಡ್ತಲ ಶಾಖೆಯ ಉನ್ನತಿಗೆ ಸರ್ವರೂ ಕೈಜೋಡಿಸಿ ಎಂದರು.
ಜ್ಯೋತಿರ್ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಹಾಗೂ ಕಟ್ಟಡದ ಮಾಲಕರಾದ ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ ಹೆಗ್ಡೆ ದಂಪತಿಯನ್ನು ಗೌರವಿಸಲಾಯಿತು.
ಎಳ್ಳಾರೆ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯೋಗೀಶ ಮಲ್ಯ, ಕಡ್ತಲ ಸಿರಿಬೈಲು ಶ್ರೀ ಬರ್ಬರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೇಸರ ಪ್ರಶಾಂತ್ ಬೆಳಿರಾಯ, ನಿವೃತ್ತ ಉಪನ್ಯಾಸಕ ಕಡ್ತಲ ಕರುಣಾಕರ ಹೆಗ್ಡೆ, ಕಡ್ತಲ ಶಾಖೆಯ ಬ್ರಾಂಚ್ ಮ್ಯಾನೇಜರ್ ವಿಜೇತ್ ರೈ ಪಿ, ಬ್ಯಾಂಕಿನ ವಿವಿಧ ಅಧಿಕಾರಿಗಳು, ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು. ಪ್ರಾದೇಶಿಕ ಕಚೇರಿಯ ವಾದಿರಾಜ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಶೆಟ್ಟಿ ನಿರೂಪಿಸಿದರು.